ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ನಡೆಯುತ್ತಿರುವ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿದ್ದು, ತಮ್ಮ ಸಹೋದ್ಯೋಗಿ ದೇವೇಂದ್ರ ಫಡ್ನವಿಸ್ ಜತೆಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲವೆಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ತಾನು ದೆಹಲಿಯಲ್ಲಿಯೇ ಸಂತುಷ್ಠರಾಗಿದ್ದೇನೆ ಎಂದಿದ್ದಾರೆ. ಹೀಗಾಗಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕೇಸರಿ ಪಕ್ಷದ ಮೊದಲ ಮುಖ್ಯಮಂತ್ರಿಯಾಗುವಂತೆ ವಿದರ್ಭದ ಬಿಜೆಪಿ ಶಾಸಕರು ಗಡ್ಕರಿಯವರಿಗೆ ದುಂಬಾಲು ಬಿದ್ದಿರುವ ಹಿನ್ನೆಲೆಯಲ್ಲಿ ಗಡ್ಕರಿ ಮತ್ತು ಫಡ್ನವೀಸ್ ಗುರುವಾರ ದಿನದಲ್ಲಿ ಎರಡು ಬಾರಿ ಭೇಟಿಯಾದರು.
ಮಹಲ್ ಪ್ರದೇಶದ ಫಡ್ನವೀಸ್ ನಿವಾಸದಲ್ಲಿ ಮಾತುಕತೆ ನಡೆಸಿದ ನಂತರ ಮಾತನಾಡುತ್ತಿದ್ದ ಕೇಂದ್ರ ಸಚಿವ ಗಡ್ಕರಿ ನಾವು ಪರಷ್ಪರ ಭಿನಾಭಿಪ್ರಾಯಗಳನ್ನು ಹೊಂದಿಲ್ಲ. ದೇವೇಂದ್ರರ ತಂದೆ ಗಂಗಾಧರ್ ರಾವ್ ಫಡ್ನವಿಸ್ (ಎಂಎಲ್ಸಿ) ನನ್ನ ರಾಜಕೀಯ ಗುರುವಾಗಿದ್ದರು. ದೇವೇಂದ್ರ ರಾಜಕೀಯಕ್ಕೆ ಬರುವಲ್ಲಿ ನಾನು ನಿಮಿತ್ತ ಮಾತ್ರ ಎಂದು ಹೇಳಿದರು.
ಮೂಲಗಳ ಪ್ರಕಾರ, ಗಡ್ಕರಿ ಮತ್ತು ಫಡ್ನವೀಸ್ ನಡುವೆ ಮುಚ್ಚಿದ ಬಾಗಿಲಿನಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಕೊನೆಯ ನಿರ್ಧಾರವನ್ನು ತಳೆಯಲಾಗಿದೆ.