ಚಂದೀಗಢ: ಕೃಷಿ ಆವಿಷ್ಕರಣೆಯ ರಾಜಧಾನಿ ಎಂದು ಹೆಸರಾಗಿದ್ದ ಭಾರತದ ಅತೀ ಶ್ರೀಮಂತ ರಾಜ್ಯ ಪಂಜಾಬ್ ಈಗ ದಿವಾಳಿಯ ಅಂಚಿನಲ್ಲಿ ನಿಂತಿದೆ. ಹಣ ಪಾವತಿಯಾಗದ ಭಯದಿಂದ ಬ್ಯಾಂಕ್ಗಳು ರಾಜ್ಯಕ್ಕೆ ಸಾಲ ನೀಡುವುದಕ್ಕೆ ಕೂಡ ಹಿಂಜರಿಯುತ್ತಿವೆ. ರಿಸರ್ವ್ ಬ್ಯಾಂಕ್ ಕೂಡ ರಾಜ್ಯಸರ್ಕಾರವನ್ನು ಕಪ್ಪುಪಟ್ಟಿಯಲ್ಲಿ ಸೇರಿಸಿದೆ. 26,000 ಕೋಟಿ ಧಾನ್ಯ ಅದರ ಗೋದಾಮುಗಳಿಂದ ಕಾಣೆಯಾದ ಆರೋಪಗಳನ್ನು ಕೂಡ ರಾಜ್ಯ ಎದುರಿಸುತ್ತಿದೆ.
4.5 ಕೋಟಿ ಸಿಬ್ಬಂದಿಗೆ 1681 ಕೋಟಿ ವೇತನ ಮತ್ತು ಪಿಂಚಣಿಗಳನ್ನು ಅಮಾನತಿನಲ್ಲಿ ಇರಿಸಲಾಗಿದೆ. ಸಣ್ಣ ರೈತರು ಪ್ರತಿ ಬೆಳೆಗೆ 50,000 ಉಚಿತ ಬೆಳೆಸಾಲಗಳನ್ನು ಪಡೆಯುವುದು ಸಹ ಈಗ ಅನುಮಾನವಾಗಿದೆ. ಪಂಜಾಬ್ ಆರೋಗ್ಯ ವೆಚ್ಚದಲ್ಲಿ ಕೂಡ ಕಡಿತವಾಗುವ ಸಂಭವವಿದೆ.
ನಿರುದ್ಯೋಗದಲ್ಲಿ ಏರಿಕೆಯಾಗಿದ್ದು, 2015ರಲ್ಲಿ 3.65 ಲಕ್ಷ ನಿರುದ್ಯೋಗಿ ಯುವಕರು ನೋಂದಣಿ ಮಾಡಿದ್ದಾರೆ. ಅಂತಿಮವಾಗಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಆರ್ಬಿಐ ರಾಜ್ಯಕ್ಕೆ 10,000 ಕೋಟಿ ರೂ. ಸಾಲವನ್ನು ನೀಡಿದೆ. ಭಾರೀ ಹಣಕಾಸಿನ ಬಿಕ್ಕಟ್ಟಿನ ನಿವಾರಣೆಗೆ ಇದು ಸಾಕಾಗಿತ್ತು.
ಪ್ರಕಾಶ್ ಸಿಂಗ್ ಬಾದಲ್ ಕಳೆದ ಡಿಸೆಂಬರ್ನಲ್ಲಿ ಮೋದಿಗೆ ಪತ್ರ ಬರೆದು, ರಾಷ್ಟ್ರದ ಅನ್ನದಾತ ಎಂದು ಹಿಂದೊಮ್ಮೆ ಪರಿಗಣಿಸಲಾಗಿದ್ದ ರಾಜ್ಯ ಭಿಕ್ಷುಕನ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಹೇಳಿದ್ದರು. ಆದರೆ ಪಂಜಾಬ್ನ ಈ ಸಂಕಷ್ಟಕ್ಕೆ ಯಾರು ಹೊಣೆಗಾರರು ಎನ್ನುವುದೇ ಪ್ರಶ್ನೆಯಾಗಿ ನಿಂತಿದೆ.