ಐದು ವರ್ಷ ಪ್ರಾಯದ ಬಾಲಕನೊಬ್ಬನ ತಲೆಕಡಿದು ಅಮಾನುಷವಾಗಿ ಕೊಲೆಗೈದ ಶಂಕಿತ ಆರೋಪಿಯನ್ನು ಜನರು ಅಮಾನುಷವಾಗಿ ಜಜ್ಜಿ ಕೊಲೆಗೈದ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಸೋನಿತ್ಪುರ ಜಿಲ್ಲೆಯ ರಂಗಪಾರಾದಲ್ಲಿನ ಟೀ ಎಸ್ಟೇಟ್ ಒಂದರಲ್ಲಿ ಗುರುವಾರ ಬಾಲಕನೊಬ್ಬನ ಶವ ಪತ್ತೆಯಾಗಿತ್ತು.
ಮಂತ್ರವಾದಿಯೊಬ್ಬ ಕಾಳೀಪೂಜೆಯ ಸಂದರ್ಭದಲ್ಲಿ ಮಗುವನ್ನು ಬಲಿ ನೀಡಿದ್ದಾನೆ ಎಂದು ಆರೋಪಿಸಿದ ಗ್ರಾಮಸ್ಥರು ಶಂಕಿತ ಮಂತ್ರವಾದಿ 'ನಾನೂ ಮಿರ್ಧಾ' ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಮೃತ ಬಾಲಕನ ತಂದೆಯ ಜತೆಗಿದ್ದ ಹಣಕಾಸು ವಿವಾದದ ದ್ವೇಷದಿಂದ ಬಾಲಕನನ್ನು ಹತ್ಯಗೈಯ್ಯಲಾಗಿದೆ. ಶಂಕಿತ ಆರೋಪಿ 'ನಾನೂ ಮಿರ್ಧಾ' ಮಂತ್ರವಾದಿಯಲ್ಲ ಎಂದು ಹೇಳಲಾಗುತ್ತಿದೆ.
ಮೃತ ಬಾಲಕನ ತಂದೆ 'ಸನಾತನ ಬಾಗ್' ಮತ್ತು ಆರೋಪಿ ನಡುವೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಇತ್ತೆಂದು ಮಾಹಿತಿ ಲಭಿಸಿದೆ.
ಮಿರ್ಧಾ ತನ್ನ ನಿವಾಸದಲ್ಲಿ ನಿಯಮಿತವಾಗಿ ಕಾಳಿಪೂಜೆಯನ್ನು ಮಾಡುತ್ತಿದ್ದ. ಬಾಲಕನನ್ನು ಅಪಹರಿಸಿ ಕಾಳಿದೇವಿಗೆ ಬಲಿ ನೀಡಿದ್ದಾನೆ ಎಂದು ಗ್ರಾಮಸ್ಥರು ವಾದಿಸುತ್ತಿದ್ದಾರೆ.