ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಕಾಲೇಜು ಫೀಸ್ ಕಟ್ಟಲು ಸಾಧ್ಯವಾಗದಿದ್ದಕ್ಕೆ ನೊಂದ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಪತಿಯನ್ನು ಜಗದೀಶ್(27) ಎಂದು ಗುರುತಿಸಲಾಗಿದ್ದು ಎಂಡೋಸಲ್ಫಾನ್ ಪರಿಣಾಮದಿಂದ ಅಂಗವಿಕಲೆಯಾಗಿದ್ದ ಶ್ರುತಿ ಎಂಬುವವರನ್ನು ಅವರು ಪ್ರೀತಿಸಿ ಮದುವೆಯಾಗಿದ್ದರು. ಓದಿನಲ್ಲಿ ಬುದ್ಧಿವಂತೆಯಾಗಿದ್ದ ಪತ್ನಿಯನ್ನವರು ಬೆಂಗಳೂನಲ್ಲಿ ಹೋಮಿಯೋಪತಿ ಓದಿಸುತ್ತಿದ್ದರು.
ಕಾಲೇಜನ್ನು ಸೇರಿದಾಗ ಆ ಖರ್ಚನ್ನು ಶ್ರುತಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಪಾವತಿಸಿದ್ದರು. ಬಳಿಕ ಕೇರಳ ಸರ್ಕಾರ ಕೂಡ ಶ್ರುತಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿತ್ತು. ಆದರೆ ಸರ್ಕಾರದಿಂದ ಯಾವ ಸಹಾಯವೂ ಸಿಗಲಿಲ್ಲ.
ವೃತ್ತಿಯಲ್ಲಿ ಚಾಲಕನಾಗಿರುವ ಜಗದೀಶ್ ತನ್ನ ಪ್ರೀತಿಯ ಪತ್ನಿಯ ಶಿಕ್ಷಣಕ್ಕೆ ಹಣಕಾಸು ವ್ಯವಸ್ಥೆ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ನದಿ ಬದಿಯಲ್ಲಿ ಬಿದ್ದಿದ್ದ ಜಗದೀಶ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಆತನೀಗ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.