ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಜನಾ ಆಯೋಗವನ್ನು ರದ್ದು ಪಡಿಸುವ ಹೇಳಿಕೆ ನೀಡಿದ ನಂತರ, ಪರ್ಯಾಯ ವ್ಯವಸ್ಥೆ ಯಾವ ರೀತಿಯಾಗಿರಬೇಕು ಎನ್ನುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಯೋಜನಾ ಆಯೋಗದ ಬದಲಿಗೆ ಐವರು ಸದಸ್ಯರಿರುವ ' ಥಿಂಕ್ ಟ್ಯಾಂಕ್' ರಚನೆಯಾಗಲಿದೆ ಎಂದು ಆಂಗ್ಲ ಪತ್ರಿಕೆಯಾದ 'ದಿ ಎಕಾನಾಮಿಕ್ಸ್ ಟೈಮ್ಸ್' ವರದಿ ಮಾಡಿದೆ.
ಮಾಜೀ ಕೇಂದ್ರ ಮಂತ್ರಿ ಸುರೇಶ್ ಪ್ರಭು ಸಮಿತಿಯಲ್ಲಿ ಮುಖ್ಯವಾದ ಸ್ಥಾನ ಪಡೆದು ಕೊಳ್ಳಲಿದ್ದಾರೆ. ಜೊತೆಗೆ ಭಾರತೀಯ-ಅಮೆರಿಕಾದ ಅರ್ಥಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಮತ್ತು ವಿವೇಕ್ ದೆಬ್ರಾಯ್ ಈ ತಂಡದಲ್ಲಿರುವ ಸಾಧ್ಯತೆಗಳಿವೆ. ಯಥಾ ರೀತಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಹಿಸಿಕೊಳ್ಳಲಿದ್ದಾರೆ.
ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿರುವ ಒಬ್ಬ ವ್ಯಕ್ತಿ ಮತ್ತು ಸಂಘ ಪರಿವಾರದ ಆಲೋಚನೆಗಳಿಗೆ ಬದ್ದರಾಗಿರುವ ಸಮಾಜ ಶಾಸ್ತ್ರಜ್ಞರೊಬ್ಬರು ಈ ಸಮಿತಿಯಲ್ಲಿರುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ ಈ ಎರಡೂ ಹುದ್ದೆಗಳಿಗಾಗಿ ಯಾವುದೇ ಹೆಸರು ಕೇಳಿ ಬಂದಿಲ್ಲ. ಮೂಲಗಳ ಪ್ರಕಾರ ವಿಜ್ಞಾನ ಮತ್ತು ಸಮಾಜ ಶಾಸ್ತ್ರಜ್ಞರ ಹೆಸರು ಅಂತಿಮಗೊಳ್ಳುವ ಸಾಧ್ಯತೆಗಳಿವೆ (ಹೆಸರು ಬಹಿರಂಗ ಪಡಿಸಬಾರದೆಂಬ ಶರತ್ತಿನ ಮೇಲೆ) ಎಂದು ಮೂಲಗಳು ತಿಳಿಸಿವೆ.
ದೆಬ್ರಾಯ್ ಮತ್ತು ಪನಗಾರಿಯಾ ಚುನಾವಣೆಗಿಂತ ಮೊದಲೇ ನರೇಂದ್ರ ಮೋದಿ ಸಲಹೆಗಾರರ ತಂಡದಲ್ಲಿದ್ದಾರೆ. ಚೀನಾದ ಡೆವಲಪ್ಮೆಂಟ್ ಆಂಡ್ ರಿಫಾರ್ಮ್ಸ್ ಕಮಿಶನ್ನಿಂದ ಮತ್ತೊಬ್ಬ ವ್ಯಕ್ತಿಯನ್ನು ಹುಡುಕಲಾಗುತ್ತಿದೆ. ತಂಡದಲ್ಲಿನ ಸದಸ್ಯರ ಸಂಖ್ಯೆಯ ಕುರಿತು ಅಧಿಕಾರಿಗಳು ತಿಳಿಸಿದ ಪ್ರಕಾರ, ಹೆಚ್ಚು ಸದಸ್ಯರು ಇದ್ದರೆ ಜಾತಿ ಮತ್ತು ಪ್ರದೇಶದಂತಹ ಪ್ರಾತಿನಿಧ್ಯ ರಾಜಕೀಯ ವಿಷಯಗಳಿಗೆ ಉಪಯುಕ್ತ ಸ್ಥಾನ ಲಭಿಸುತ್ತದೆ, ಆದರೆ ಒಂದು ಚಿಕ್ಕ ಮತ್ತು ದಕ್ಷ ತಂಡ ಹೆಚ್ಚು ಜನರಿಗೆ ಇಷ್ಟವಾಗುತ್ತಿದೆ. ಏಕೆಂದರೆ ಪ್ರಸ್ತುತವಿರುವ ಎಂಟು ಸದಸ್ಯರ ಯೋಜನಾ ಆಯೋಗಕ್ಕಿಂತ ಹೊಸ ಸಮಿತಿ ವಿಭಿನ್ನವಾಗಿರಲಿದೆ. ಅಧಿಕಾರಿಗಳ ಪ್ರಕಾರ, 'ಥಿಂಕ್ ಟ್ಯಾಂಕ್' ಹತ್ತಿರ ಬೇರೆ ಕ್ಷೇತ್ರದ ತಜ್ಞರನ್ನು ನೇಮಕಗೊಳಿಸುವ ಅಧಿಕಾರವಿರಲಿದೆ.
ಸಂಸದ ಸುರೇಶ್ ಪ್ರಭು ಯಾರು ?
ಮಹಾರಾಷ್ಟ್ರದ ರಾಜಾಪುರ್ ಲೋಕಸಭೆ ಕ್ಷೇತ್ರದಿಂದ ಶಿವಸೇನೆ ಸಂಸದರಾಗಿ ಆಯ್ಕೆಯಾದ ಸುರೇಶ್ ಪ್ರಭು,.ನಾಲ್ಕು ಬಾರಿ ಸತತ ಸಂಸದರಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಪ್ರಭು,ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ.
ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮತ್ತು ಪರಿಸರ ಮತ್ತು ಅರಣ್ಯಸಚಿವರಾಗಿದ್ದರು. ಮೋದಿ ಸರಕಾರ ಇವರಿಗೆ 'ಎಡ್ವೈಜರಿ ಗ್ರೂಪ್ ಫಾರ್ ಇಂಟಿಗ್ರೆಟೆಡ್ ಡೆವಲ್ಮೆಂಟ್ ಆಫ್ ಪವರ್, ಕೋಲ್ ಆಂಡ್ ರಿನ್ಯೂವೆಬಲ್ ಎನರ್ಜಿ'ಯ ಉನ್ನತ ಮಟ್ಟದ ಸಲಹಾಕಾರ ತಂಡದ ಮುಖ್ಯಸ್ಥರಾಗಿ ನೇಮಕ ಮಾಡಿದೆ.