ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರನ್ನು ಮಹಾರಾಷ್ಟ್ರ ಪೊಲೀಸ್ ಸೇವೆಯಿಂದ ಅಮಾನತು ಮಾಡಿದೆ.
ದಯಾ ನಾಯಕ್ ಅಮಾನತುಗೊಂಡಿರುವುದನ್ನು ಸರಕಾರಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಆದರೆ ಅಮಾನತಿಗೆ ಕಾರಣವೇನೆಂದು ತಿಳಿಸಲು ನಿರಾಕರಿಸಿದ್ದಾರೆ.
1995 ರ ಬ್ಯಾಚ್ ಪೊಲೀಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ನಾಯಕ್ ಅವರನ್ನು ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು 2006ರಲ್ಲಿ ಬಂಧಿಸಿದ್ದರು. ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ನಾಯಕ್ ವಿರುದ್ಧ ಅಕ್ರಮ ಆಸ್ತಿ ಆರೋಪವನ್ನು ಮಾಡಿದ್ದರು. ಸುಮಾರು ಆರುವರೆ ವರ್ಷಗಳ ಕಾಲ ಅಮಾನತಿನಲ್ಲಿದ್ದ ಅವರು ಸುಪ್ರೀಂ ಕೋರ್ಟ್ ಅವರ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ ಬಳಿಕ 2012ರ ಪುನಃ ಸೇವೆಗೆ ಸೇರ್ಪಡೆಯಾಗಿದ್ದರು.
ಕಳೆದ ವರ್ಷ ನಾಗ್ಪುರಕ್ಕೆ ವರ್ಗಾಯಿಸಲಾಗಿತ್ತು. ಆದರೆ ಅವರು ಸೇವೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಯಕ್ ಅವರನ್ನು ಅಮಾನತು ಮಾಡಿರಬಹುದು ಎಂದು ಊಹಿಸಲಾಗಿದೆ.
ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಹೆಸರುವಾಸಿಯಾಗಿರುವ ಅವರು ಕುಖ್ಯಾತ ಪಾತಕಿಗಳ ಹುಟ್ಟಡಗಿಸಿದ್ದಾರೆ.