ಇಂಗ್ಲಿಷ್ ಮ್ಯಾನ್ ಆಗಲು ಪ್ರಯತ್ನಿಸಬೇಡಿ. ಅಗತ್ಯಬಿದ್ದಾಗ ಆಂಗ್ಲ ಭಾಷೆಯಲ್ಲಿ ಮಾತನಾಡಿ ಎಂದು ವಿದ್ಯಾರ್ಥಿಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕರಿಗೆ ನಾನು ಆಂಗ್ಲ ವಿರೋಧಿ ಎನ್ನುವ ಭಾವನೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸುಮಾರು ಅರ್ಧಗಂಟೆಗಳ ಕಾಲ ಹಿಂದಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಗತ್ಯವಾಗಿದ್ದಾಗ ಇಂಗ್ಲೀಷ್ ಮಾತನಾಡಿ ಆದರೆ ಇಂಗ್ಲಿಷ್ಮ್ಯಾನ್ ಆಗಲು ಹೋಗಬೇಡಿ. ಆಂಗ್ಲ ಭಾಷೆ ಮಾತನಾಡುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ ಎಂದರು.
ಆಂಗ್ಲ ಭಾಷೆಯನ್ನು ಯಾರೊಬ್ಬರು ದ್ವೇಷಿಸಬಾರದು. ಆದರೆ, ಪ್ರತಿಯೊಬ್ಬ ಭಾರತೀಯನಿಗೆ ತನ್ನ ಸ್ವಂತ ಭಾಷೆಯ ಬಗ್ಗೆ ಅಭಿಮಾನವಿರಬೇಕು ಎಂದು ಅಭಿಪ್ರಾಯಪಟ್ಟರು.
ನಾನು ಕೇವಲ ಹಿಂದಿ ಭಾಷೆಯ ಬಗ್ಗೆ ಮಾತನಾಡುತ್ತಿಲ್ಲ. ಭಾರತದಲ್ಲಿರುವ ಎಲ್ಲಾ ಭಾಷೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಖಾಲಿ ಅಂಗ್ರೇಜ್ ನಹಿ ಬನೋ ಪಹೇಲೆ ಭಾರತೀಯ ಬನೋ ಎಂದು ಕರೆ ನೀಡಿದರು.
ಇಂದಿನ ಕಾಲದಲ್ಲಿ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಪರಿಪೂರ್ಣವಾಗಿ ಅಭಿನಂಧಿಸುವುದಿಲ್ಲ. ಕೇವಲ ಹಾಯ್, ಬೈ ಎಂದು ಹೇಳುತ್ತಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.