ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ ಮರು ಮಾತಿನೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಹಾರಾಷ್ಟ್ರದಲ್ಲಿ ಮೈತ್ರಿ ಬಿರುಕಿಗೆ ತಮ್ಮನ್ನು, ಪುತ್ರ ರಾಹುಲ್ ಗಾಂಧಿಯನ್ನು ಮತ್ತು ತಮ್ಮ ಪಕ್ಷವನ್ನು ಆಕ್ಷೇಪಿಸದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
15 ವರ್ಷದ ಮೈತ್ರಿ ಮುರಿದು ಬೀಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕಾರಣರು ಎಂದು ಪವಾರ್ ಸೋಮವಾರ ಆರೋಪಿಸಿದ್ದರು.
ರಾಹುಲ್ ಗಾಂಧಿ ಹಾಗೂ ಅವರ ತಂಡ ಮೈತ್ರಿಯ ಪಾಲುದಾರರನ್ನು ಕಡೆಗಣಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ನಾವು ಕೂಡ ಕಾಂಗ್ರೆಸ್ನ ರಾಜಕೀಯ ಶಾಲೆಗೆ ಸೇರಿದವರಾಗಿದ್ದು, ಈ ದಿನಗಳು ಬರಲಿದೆ ಎಂಬುದು ನಮಗೆ ಮೊದಲೇ ತಿಳಿದಿತ್ತು ಎಂದು ಪವಾರ್ ಹೇಳಿದ್ದರು.
ಪೃಥ್ವಿರಾಜ್ ಚವಾಣ್ ಉದ್ದೇಶಪೂರ್ವಕವಾಗಿ ಎನ್ಸಿಪಿ ವಿರುದ್ಧ ವದಂತಿಗಳನ್ನು ಹರಡಿದರು. ವಿಲಾಸ್ರಾವ್ ದೇಶ್ಮುಖ್, ಸುಶೀಲ್ ಕುಮಾರ್ ಶಿಂಧೆ ಅಥವಾ ಅಶೋಕ್ ಚವಾಣ್ ಜೊತೆ ನಾವು ಎಂದಿಗೂ ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ " ಎಂದು ಎನ್ಸಿಪಿ ಮುಖಂಡ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪೃಥ್ವಿರಾಜ್ ಚವಾಣ್ ನಮ್ಮ ವಿರುದ್ಧ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರೆ. 1999ರ ಲೋಕಸಭಾ ಚುನಾವಣೆಯಲ್ಲಿ ಅವರು ಎನ್ಸಿಪಿ ಅಭ್ಯರ್ಥಿಯಿಂದ ಸೋಲನ್ನು ಅನುಭವಿಸಿದ್ದು ಅವರ ಈ ಸೇಡಿಗೆ ಕಾರಣ ಎಂದು ಪವಾರ್ ಕೆಣಕಿದ್ದಾರೆ.