ಜೆಎನ್ಯು ಆವರಣದಲ್ಲಿ ನಡೆದ ದೇಶದ್ರೋಹ ಘಟನೆಯ ರೂವಾರಿಗಳಲ್ಲಿ ಒಬ್ಬನೆಂಬ ಆರೋಪ ಹೊತ್ತಿರುವ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಉಮರ್ ಖಾಲಿದ್ಗೆ ಭೂಗತ ಪಾತಕಿ ರವಿ ಪೂಜಾರಿ ಶುಕ್ರವಾರ ಜೀವಬೆದರಿಕೆ ಒಡ್ಡಿದ್ದಾನೆ.
ತನ್ನನ್ನು ತಾನು ಹಿಂದೂ ಡಾನ್ ಎಂದು ಅಭಿವ್ಯಕ್ತಗೊಳಿಸಲು ಪ್ರಯತ್ನಿಸುತ್ತಿರುವ ಪೂಜಾರಿ ನಿನ್ನೆ ಸಂಜೆ ಉಮರ್ ತಂದೆ ಡಾ. ಸೈಯದ್ ಕಾಸಿಮ್ ರಸೂಲ್ ಇಲ್ಯಾಸ್ ಅವರಿಗೆ ಫೋನ್ ಕರೆ ಮಾಡಿದ್ದ ಎಂದು ತಿಳಿದು ಬಂದಿದೆ.
ಅಂತರ್ಜಾಲ ಆಧಾರಿತ ಪ್ರೋಟೋಕಾಲ್ ಕರೆ ಇದಾಗಿದ್ದು, ಸಂಖ್ಯೆ 004081 ಎಂದು ಡಿಸ್ಪ್ಲೇ ಆಗಿದೆ. ಪೂಜಾರಿ ತನ್ನ ಪರ್ಸನಲ್ ಸಂಖ್ಯೆಯನ್ನು (0044*44***0035) ಸಹ ಇಲ್ಯಾಸ್ ಅವರಿಗೆ ನೀಡಿದ್ದು ನಿಮ್ಮ ಮಗನಿಗೆ ತಾನು ನೀಡಿದ ಎಚ್ಚರಿಕೆ ಬಗ್ಗೆ ತಿಳಿಸಿ ಎಂದು ಸೂಚಿಸಿದ್ದಾನೆ. ಪೂಜಾರಿ ಆಸ್ಟ್ರೇಲಿಯಾದಲ್ಲಿ ಅಡಗಿದ್ದಾನೆಂದು ಶಂಕೆ ಇದ್ದು ಆತ ಯುಕೆ ಮೊಬೈಲ್ ಬಳಸುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೂಜಾರಿ ಈ ಸಂಖ್ಯೆಯನ್ನು ಬಳಸುತ್ತಿದ್ದಾನೆ ಎನ್ನುವುದನ್ನು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಖಚಿತ ಪಡಿಸಿದ್ದು 009(009*9**0**33**) ನಿಂದ ಪ್ರಾರಂಭವಾಗುವ ಇನ್ನೊಂದು ಸಂಖ್ಯೆಯನ್ನು ಸಹ ಆತ ಬಳಸುತ್ತಾನೆ ಎಂದು ಹೇಳಿದ್ದಾರೆ.
ಉಮರ್ ಎಲ್ಲಿದ್ದಾನೆ ಎಂದು ಆತ ನನ್ನ ಬಳಿ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ಅದಕ್ಕೆ ಪೂಜಾರಿ ಆತ ನಿಮ್ಮ ಮಗ ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾನೆಂಬುದು ನನಗೆ ಗೊತ್ತು , ಆತನನ್ನು ಮುಗಿಸುತ್ತೇನೆ ಎಂದು ಬೆದರಿಕೆ ಒಡ್ಡಿದ ಎಂದು ಇಲ್ಯಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.