ಶನಿ ಶಿಂಗ್ಣಾಪುರ್ ಮತ್ತು ತ್ರಿಂಭಕೇಶ್ವರ್ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶಿಸುವ ಹಕ್ಕು ಪಡೆದುಕೊಂಡು ಗೆಲುವಿನ ಉತ್ಸಾಹದಲ್ಲಿರುವ ಭೂಮಾತಾ ಬ್ರಿಗೇಡ್ನ ತೃಪ್ತಿ ದೇಸಾಯಿ, ಇದೀಗ, ಮಹಿಳೆಯರಿಗೆ ನಿಷೇಧ ಹೇರಿರುವ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸ್ಥಳೀಯ ಎಐಎಂಐಎಂ ಪಕ್ಷ ನಾಯಕನೊಬ್ಬ ಮಾತನಾಡಿ, ಯಾವುದೇ ಕಾರಣಕ್ಕೂ ತೃಪ್ತಿ ದೇಸಾಯಿಯನ್ನು ದರ್ಗಾದೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಪ್ರವೇಶಿಸಿದಲ್ಲಿ ಅವರ ಮುಖಕ್ಕೆ ಕಪ್ಪು ಮಸಿ ಬಳೆಯಲಾಗುವುದು ಎಂದು ತಿಳಿಸಿದ್ದಾರೆ.
ಹಾಜಿ ಅಲಿ ದರ್ಗಾ ಪ್ರವೇಶ ಕುರಿತಂತೆ ಶಾಂತಿಯುತ ಮೆರವಣಿಗೆ ನಡೆಸಿ, ದರ್ಗಾದಲ್ಲಿ ಪ್ರಾರ್ಥಿಸಿದ ನಂತರ ಮುಂದಿನ ಹೋರಾಟದ ರೂಪರೇಷೆಗಳನ್ನು ರೂಪಿಸಲಾಗುವುದು ಎಂದು ದೇಸಾಯಿ ತಿಳಿಸಿದ್ದಾರೆ.
ಬಾಲಿವುಡ್ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ನಮ್ಮ ಸಮಾನತೆಯ ಹೋರಾಟಕ್ಕೆ ಬೆಂಬಲ ನೀಡಿದಲ್ಲಿ ನಮಗೆ ನೆರವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಎಐಎಂಐಎಂ ಮುಖಂಡ ಹಾಜಿ ರಫತ್ ಹುಸೈನ್ ಮಾತನಾಡಿ, ಸಮಾಧಿಯಿರುವ ಸ್ಥಳದಲ್ಲಿ ಮಹಿಳೆಯರು ಪ್ರವೇಶಿಸುವುದು ಇಸ್ಲಾಂಗೆ ವಿರುದ್ಧವಾಗಿದೆ. ನಮ್ಮ ಪಕ್ಷದ ಬೆಂಬಲಿಗರು ಯಾವುದೇ ಕಾರಣಕ್ಕೂ ದೇಸಾಯಿಯವರನ್ನು ದರ್ಗಾದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.