ಸ್ವಾತಂತ್ರ್ಯೋತ್ಸವದ ದಿನ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಮಾನತೆಯ ಬಗ್ಗೆ ಮಾತುಗಳನ್ನಾಡುತ್ತಿದ್ದರೇ, ಅದೇ ದೆಹಲಿಯ ಪ್ರತಿಷ್ಠಿತ ಪಂಚತಾರಾ ಹೊಟೆಲ್ ಒಬೆರಾಯ್ನಲ್ಲಿ, ಅಲ್ಲಿನ ಸಿಬ್ಬಂದಿಗಳಿಂದಲೇ ನರ್ಸ್ ಒಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ.
ಈ ಪ್ರಕರಣದ ಆರೋಪಿಗಳಾದ 20ರ ಹರೆಯದ ನೀರಜ್ ಮತ್ತು ರಾಜನ್ ಬಂಧಿಸಲ್ಪಟ್ಟಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
28 ವರ್ಷದ ಪೀಡಿತೆ ಟಿಬೆಟ್ ಮೂಲದವಳಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಯೊಂದರ ಉದ್ಯೋಗಿಯಾಗಿದ್ದಾರೆ. ರಾಜಧಾನಿಯ ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿರುವ ಒಬೆರಾಯ್ ಹೊಟೆಲ್ ಮಾಲೀಕರ ಪತ್ನಿಯ ಆರೋಗ್ಯದ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು, ಆಕೆಗೆ 24*7 ನಿಗಾ ಇಡಬೇಕಾದ ಅಗತ್ಯವಿದ್ದುದರಿಂದಾಗಿ ನರ್ಸ್ ಶುಶ್ರೂಷೆಗೆಂದು ಹೋಗಿದ್ದರು.
ಆರೋಪಿಗಳಾದ ನೀರಜ್ ಮತ್ತು ರಾಜನ್ ಅವರನ್ನು ಕೂಡ ವೃದ್ಧ ಮಹಿಳೆಯನ್ನು ನೋಡಿಕೊಳ್ಳುವುದಕ್ಕಾಗಿ ನೇಮಿಸಲಾಗಿತ್ತು.
ಪೀಡಿತಳ ಹೇಳಿಕೆಯ ಮೆರೆಗೆ ರೋಗಿಯನ್ನು ಇಡಲಾಗಿದ್ದ ಹೊಟೆಲ್ನ ಅತಿಥಿ ಕೋಣೆಯಲ್ಲಿ ಆಗಸ್ಟ್ 15 ರ ಮಧ್ಯರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು , ಈ ವಿಷಯವನ್ನು ಬಹಿರಂಗ ಪಡಿಸಿದರೆ ಸಾಯಿಸುವುದಾಗಿ ಬೆದರಿಕೆ ಒಡ್ಡಿದರು. ಕಳೆದ ರಾತ್ರಿ ಮತ್ತೆ ಆಕೆಯ ಮೇಲೆ ಅವರು ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ, ತಪ್ಪಿಸಿಕೊಂಡ ಆಕೆ ತನ್ನ ಪತಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾಳೆ.
ವೈದ್ಯಕೀಯ ಪರೀಕ್ಷೆಯ ಪ್ರಕಾರ ಅತ್ಯಾಚಾರ ನಡೆದದ್ದು ಸಾಬೀತಾಗಿದ್ದು, ಆರೋಪಿಗಳ ಮೇಲೆ ಸಂಬಂಧಿಸಿದ ಸೆಕ್ಸನ್ಗಳ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.