ಗಾಳಿಪಟ ಕೊಳ್ಳಲು ಕೇವಲ 2 ರೂಪಾಯಿ ಕೇಳಿದ್ದಕ್ಕೆ ಪಾಪಿ ತಂದೆಯೊಬ್ಬ 5 ವರ್ಷದ ಪುಟ್ಟಮಗನಿಗೆ ಹರಿತವಾದ ಚಾಕುವಿನಿಂದ ಇರಿದ ಹೇಯ ಘಟನೆ ವಾರಣಾಸಿಯ ಸಾರ್ನಾಥ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ತಂದೆಯಿಂದಲೇ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಬಾಲಕನನ್ನು ಒಂದನೇ ತರಗತಿಯಲ್ಲಿ ಓದುತ್ತಿರುವ ಶಿವಂ ಎಂದು ಗುರುತಿಸಲಾಗಿದೆ. ಪ್ರವಾಸಿ ಮಾರ್ಗದರ್ಶಿ ಆಗಿ ಕೆಲಸ ಮಾಡುತ್ತಿರುವ ವಿನೋದ್ ಪತ್ನಿ, 3 ವರ್ಷದ ಪುತ್ರಿ ಮತ್ತು 10 ಮತ್ತು 5 ವರ್ಷದ ಪುತ್ರಿ ಜತೆ ಗಂಜ್ ಪ್ರದೇಶದಲ್ಲಿ ವಾಸವಾಗಿದ್ದು, ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದ ಎನ್ನಲಾಗುತ್ತಿದೆ.
ಭಾನುವಾರ ದಿನ ಬಾಲಕ ಗಾಳಿಪಟ ಕೊಳ್ಳಲು 2 ರೂಪಾಯಿ ನೀಡುವಂತೆ ತಂದೆ ವಿನೋದ್ ರಾಜಭರ್(35) ನನ್ನು ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ವಿನೋದ್ ಮಗನನ್ನು ಟೆರೇಸ್ಗೆ ಕರೆದೊಯ್ದು ಚಾಕುವಿನಿಂದ ಚುಚ್ಚಿದ್ದಾನೆ. ಇದನ್ನು ಕಂಡ ಬಾಲಕನ ಅಣ್ಣ ತಾಯಿಗೆ ವಿಷಯ ತಿಳಿಸಿದ್ದು, ಓಡಿ ಹೋಗಿ ಬಾಲಕನನ್ನು ತಂದೆಯ ಕೈಯ್ಯಿಂದ ಎಳೆದುಕೊಂಡು ಆಸ್ಪತ್ರೆಗೆ ಸೇರಿಸಲಾಗಿದೆ.
ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಯನ್ನು ಕೈಗೊಂಡಿದ್ದಾರೆ.
ಬಾಲಕನಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.