ಕಳೆದ 2013ರಲ್ಲಿ ಪಶ್ಚಿಮ ಬಂಗಾಳದ ಕಾಮದುನಿ ಗ್ರಾಮದಲ್ಲಿ ನಡೆದ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ.
ಹೆಚ್ಚುವರಿ ನ್ಯಾಯಮೂರ್ತಿಯಾದ ಸಂಚಿತಾ ಸರ್ಕಾರ್, ಪ್ರಕರಣದಲ್ಲಿ ಆರೋಪಿಗಳಾದ ಅಮಿನುಲ್ ಅಲಿ, ಸೈಫಉಲ್ ಅಲಿ ಮತ್ತು ಅನ್ಸಾರ್ ಅಲಿಯವರಿಗೆ ಮರಣದಂಡನೆ ವಿಧಿಸಿದ್ದಾರೆ. ಇತರ ಮೂವರು ಆರೋಪಿಗಳಾದ ಇಮಾನುಲ್ ಇಸ್ಲಾಂ, ಅಮಿನುಲ್ ಇಸ್ಲಾಂ ಮತ್ತು ಭೋಲಾ ನಾಸ್ಕರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕಳೆದ 2013ರಲ್ಲಿ ಪಶ್ಚಿಮ ಬಂಗಾಳದ ಕಾಮುದುನಿ ಗ್ರಾಮದಲ್ಲಿ ಆರೋಪಿಗಳು, 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ರೇಪ್ ಎಸಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ನಂತರ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದರು.
ಇತರ ಇಬ್ಬರು ಆರೋಪಿಗಳಾದ ರಫಿಕುಲ್ ಇಸ್ಲಾಂ ಮತ್ತು ನೂರ್ ಅಲಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಲಾಯಿತು. ಮತ್ತೊಬ್ಬ ಆರೋಪಿ ಗೋಪಾಲ್ ನಾಸ್ಕರ್ ವಿಚಾರಣೆ ವೇಳೆಯಲ್ಲಿ ಸಾವನ್ನಪ್ಪಿದ್ದನು.
ವಿದ್ಯಾರ್ಥಿನಿಯ ಹತ್ಯೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿದ್ಯಾರ್ಥಿನಿಯ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆಗೊಳಗಾಗಿದ್ದರು.