ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮನೆಯಲ್ಲಿ ಅನ್ವೇಷಕ ಸಾಧನಗಳು ದೊರೆತಿವೆ ಎಂಬ ಆರೋಪ ಆಧಾರವಿಲ್ಲದ್ದು ಎಂದಿರುವ ಆಡಳಿತಾರೂಢ ಬಿಜೆಪಿ, ಹತಾಶ ಕಾಂಗ್ರೆಸ್ ತನ್ನ ಗುರುತನ್ನು ಉಳಿಸಿಕೊಳ್ಳಲು ಮತ್ತು ದೇಶದ ಮುಂದೆ ಬಿಜೆಪಿ ಸರ್ಕಾರದ ಪ್ರತಿಷ್ಠೆಯನ್ನು ಕಳೆಗುಂದಿಸುವ ಉದ್ದೇಶದಿಂದ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಈ ವಿಚಾರವಾಗಿ ಸರ್ಕಾರದ ವಿವರಣೆಯನ್ನು ಕೇಳಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ "ದುರದೃಷ್ಟಕರ" ಎಂದು ಕೇಸರಿ ಪಕ್ಷ ಹೇಳಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ರೀತಿಯ ಅಸಂಬದ್ಧ ವಿಷಯಗಳ ಕುರಿತು ಮಾತನಾಡುತ್ತಿರುವುದು ದುರಾದೃಷ್ಟಕರ. ಯಾವುದೇ ಆಧಾರವಿಲ್ಲದ ವಿಷಯಗಳ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿರುವುದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿಯ ಮಾಧ್ಯಮ ಉಸ್ತುವಾರಿ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನುಂಡು ಹತಾಶವಾಗಿರುವ ಕಾಂಗ್ರೆಸ್, ಕಳೆಗುಂದಿರುವ ತನ್ನ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಈ ರೀತಿಯ ಆಧಾರರಹಿತ ಆರೋಪಗಳನ್ನು ಹುಟ್ಟು ಹಾಕುತ್ತಿದೆ ಎಂದು ಶರ್ಮಾ ಆಪಾದಿಸಿದ್ದಾರೆ.