ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಕುರಿತಂತೆ ಪ್ರಧಾನಿ ಮೋದಿ ಮೌನವಹಿಸಿರುವುದನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್, ವಿಶ್ವಶಕ್ತಿಯಾಗಿ ಹೊರಹೊಮ್ಮಲಿರುವ ಭಾರತದಲ್ಲಿ ಸಮುದಾಯಗಳನ್ನು ವಿಭಜಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ದಲಿತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸಿದ ಅವರು, ಇಂತಹ ಘಟನೆಗಳು ದೇಶಕ್ಕೆ ಮಾರಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಭಾರತದ ನೆರೆಹೊರೆಯಲ್ಲಿ ಅನೇಕ ಶತ್ರುಗಳು ಭಾರತವನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿವೆ. ದೇಶದಲ್ಲಿ ಸಮುದಾಯಗಳನ್ನು ಇಬ್ಬಾಗಿಸುವ ಮೂಲಕ ಶತ್ರುಗಳಿಗೆ ನಾವು ಸುಲಭ ಟಾರ್ಗೆಟ್ ಆಗಬಾರದು ಎಂದು ತಿಳಿಸಿದ್ದಾರೆ.
ಮೂವರು ದಲಿತ ಯುವಕರನ್ನು ಕಾರಿಗೆ ಕಟ್ಟಿಹಾಕಿ ಮನಬಂದಂತೆ ಥಳಿಸುತ್ತಿರುವ ವಿಡಿಯೋ ನೋಡಿ ಆಘಾತಗೊಂಡಿದ್ದೇನೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಘಟನೆ ಪ್ರಧಾನಿ ಮೋದಿಯವರ ರಾಜ್ಯದಲ್ಲಿ ನಡೆದಿರುವುದು ನಾಚಿಕೆಗೇಡಿತನದ ಸಂಗತಿ ಎಂದರು.
ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದಲ್ಲಿ ವ್ಯವಸ್ಥಿತವಾಗಿ ಹಲ್ಲೆ ನಡೆಸಲಾಗುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.