6 ತರಗತಿ ಬಾಲಕನೊಬ್ಬ 1 ನೇ ತರಗತಿ ಬಾಲಕನಿಗೆ ಕಲ್ಲಿನಿಂದ ಜಜ್ಜಿ ಸಾಯಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದಿದೆ.
ಒಂದೇ ಏರಿಯಾದ ನಿವಾಸಿಗಳಾಗಿದ್ದ ಆರೋಪಿ ಮತ್ತು ಮೃತರಿಬ್ಬರೂ ತಿರುಪುರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಜತೆಗೆ ಅವರಿಬ್ಬರೂ ಒಂದೇ ಬಸ್ನಲ್ಲಿ ಶಾಲೆಗೆ ಹೋಗುತ್ತಿದ್ದರು.
ಬುಧವಾರ ಮುಂಜಾನೆ 8.15ಕ್ಕೆ ಶಾಲೆಗೆ ತಲುಪಿದ್ದ ವಿದ್ಯಾರ್ಥಿಗಳು, ತರಗತಿ ಪ್ರಾರಂಭವಾಗುವುದಕ್ಕೆ ಮೊದಲು ಯಾವುದೋ ಕಾರಣಕ್ಕೆ ಜಗಳವನ್ನು ಪ್ರಾರಂಭಿಸಿದ್ದರು. ಮಾತಿನಲ್ಲಿ ಪ್ರಾರಂಭವಾದ ಜಗಳ ಕೈ ಕೈ ಮಿಲಾಯಿಸಿ ಹೊಡೆದಾಡುವ ಮಟ್ಟಕ್ಕೆ ಹೋಯಿತು. ಕೋಪದ ಆವೇಶದಲ್ಲಿ ಹಿರಿಯ ಬಾಲಕ ಕಿರಿಯವನ ಹಣೆಗೆ ಕಲ್ಲಿನಿಂದ ಜಜ್ಜಿದಾಗ ಕೆಳಕ್ಕೆ ಬಿದ್ದ ಬಾಲಕನಿಗೆ ಇನ್ನೊಂದು ಕಲ್ಲು ಬಡಿದು ಆತ ಸ್ಥಳದಲ್ಲೇ ಮೃತನಾದ ಎಂದು ಪೊಲೀಸರು ತಿಳಿಸಿದ್ದಾರೆ.