ಚೆನೈ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ 54 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಹುಡುಗಿಯೊಬ್ಬಳನ್ನು 1.3 ಲಕ್ಷ ರೂಪಾಯಿಗೆ ಆಕೆಯ ಪೋಷಕರಿಂದ ಖರೀದಿಸಿ, ಕಳೆದ 7 ತಿಂಗಳಿಂದ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿದ್ದಾರೆ. ಆತ ಆಕೆಯನ್ನು ಮದುವೆ ಕೂಡ ಆಗಿದ್ದು, ಆತನ ಕಾಟ ತಾಳಲಾರದೇ ಬಾಲಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂಬುದು ಪೋಲಿಸರ ವಿವರಣೆ.
ಆರೋಪಿಯನ್ನು ಕುಪ್ಪುಸ್ವಾಮಿ ಎಂದು ಗುರುತಿಸಲಾಗಿದ್ದು, ಆತ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನ ವಿರುದ್ಧ ಮಕ್ಕಳ ಸಹಾಯವಾಣಿ, ಪೋಲಿಸ್ ಸೂಪರಿಂಟೆಂಡೆಂಟ್ ಎ ರಾಧಿಕಾರವರ ಬಳಿ ದೂರು ನೀಡಿದ್ದು, ಪರಾರಿಯಾಗಿರುವ ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
ಭೂತಮಪಾಡಿ ಹಳ್ಳಿಯಲ್ಲಿ ಕೂಲಿ ಕೂಲಿ ಮಾಡಿಕೊಂಡು ವಾಸವಾಗಿರುವ ಪೀಡಿತ ಬಾಲಕಿಯ ತಂದೆ ತಾಯಿಗಳಾದ ಚಿನ್ನದುರೈ 65, ಮತ್ತು ಮಲ್ಲಿಗಾ 45, ಮತ್ತು ಮಧ್ಯವರ್ತಿ ವೇಲುಮುರುಗನ್ ಅವರನ್ನು ಪೋಲಿಸರು ಜುಲೈ 29 ರಂದೇ ಬಂಧಿಸಿದ್ದಾರೆ.
ಮತ್ತೊಬ್ಬ ಮಧ್ಯವರ್ತಿ ಅರ್ಮುಗಮ್ ಕೂಡ ಕಳೆದ ಗುರುವಾರ ಪೋಲಿಸರ ಕೈಸೆರೆಯಾಗಿದ್ದಾನೆ.
ಭೂತಮಪಾಡಿ ಹಳ್ಳಿಯಲ್ಲಿನ ಯುವಕರ ಗುಂಪೊಂದು ಜುಲೈ 18 ರಂದು ಈ ಪ್ರಕರಣದ ಕುರಿತು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಡಿ. ರಾಜೇಶ್ ಕಣ್ಣನ್ ಅವರ ಬಳಿ ದೂರು ದಾಖಲಿಸಿದ್ದರು.
ಸಮಾಜ ಕಲ್ಯಾಣ ಅಧಿಕಾರಿ ಆರ್ ಭುವನೇಶ್ವರ್ ಮತ್ತು ಮಕ್ಕಳ ರಕ್ಷಣಾ ಅಧಿಕಾರಿ ಜತೆ ಅದೇ ದಿನ ಗ್ರಾಮಕ್ಕೆ ಭೇಟಿ ನೀಡಿದ್ದ ಕಣ್ಣನ್ ಪ್ರಾಥಮಿಕ ತನಿಖೆ ನಡೆಸಿದ್ದರು.