ನ್ಯಾ. ಬಿ.ಎಸ್. ಚೌಹಾಣ್ ನೇತೃತ್ವದಲ್ಲಿ ಕಾವೇರಿ ನ್ಯಾಯಾಧಿಕರಣದ ವಿಚಾರಣೆ ನಡೆಯುತ್ತಿದ್ದು, ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಅರ್ಜಿ ಬಾಕಿಯಿರುವುದರಿಂದ ಈ ಹಂತದಲ್ಲಿ ನ್ಯಾಯಾಧಿಕರಣದ ವಿಚಾರಣೆಗೆ ಕರ್ನಾಟಕ ಆಕ್ಷೇಪ ಸಲ್ಲಿಸಿತು.
ಕರ್ನಾಟಕದ ವಾದವನ್ನು ಒಪ್ಪಿದ ನ್ಯಾಯಾಧಿಕರಣ, ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ತಮಿಳುನಾಡಿಗೆ ಸೂಚನೆ ನೀಡಿದೆ.ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಬಾಕಿವುಳಿದಿರುವುದರಿಂದ ವಿಚಾರಣೆ ನಡೆಸಲು ನ್ಯಾಯಾಧಿಕರಣ ನಿರಾಕರಿಸಿತು. ವಿಚಾರಣೆ ನಡೆಸಬೇಕೋ ಬೇಡವೋ ಎಂದು ಸುಪ್ರೀಂಕೋರ್ಟ್ನಿಂದ ಸ್ಪಷ್ಟನೆ ಪಡೆಯಿರಿ ಎಂದು ಅದು ತಮಿಳುನಾಡಿಗೆ ಸೂಚಿಸಿತು.
ಈ ನಡುವೆ ಕಾವೇರಿ ವಿವಾದದ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ ಎಂದು ನವದೆಹಲಿಯಲ್ಲಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಸಿಎಂಗೆ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಇಂದು ಕಾವೇರಿ ನ್ಯಾಯಾಧಿಕರಣದ ವಿಚಾರಣೆಯಿದೆ. ಏನಾಗುತ್ತದೆಯೋ ಎಂದು ಸಂಜೆಯವರೆಗೆ ಕಾದು ನೋಡೋಣ ಎಂದು ದೇವೇಗೌಡ ಹೇಳಿದರು. ಸದಾನಂದ ಗೌಡ ದಿಟ್ಟವಾದ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.