Select Your Language

Notifications

webdunia
webdunia
webdunia
webdunia

ಅಮ್ಮನ ಅಂತಿಮ ಇಚ್ಛೆ ನೆರವೇರಿಸಿದಕ್ಕೆ ಸಹೋದರಿ ಹತ್ಯೆ

ಅಮ್ಮನ ಅಂತಿಮ ಇಚ್ಛೆ ನೆರವೇರಿಸಿದಕ್ಕೆ ಸಹೋದರಿ ಹತ್ಯೆ
ರಾಯ್ಪುರ , ಶುಕ್ರವಾರ, 3 ಏಪ್ರಿಲ್ 2015 (12:43 IST)
ತನ್ನ ತಾಯಿಯ ಕೊನೆಯಾಸೆಯಂತೆ ಆಕೆಯ ಅಂತಿಮ ಸಂಸ್ಕಾರವನ್ನು ತನ್ನ ಕೈಯ್ಯಾರೆ ಮಾಡಿದ ಮಹಿಳೆಯೊಬ್ಬಳು ಈ ಕಾರಣಕ್ಕಾಗಿಯೇ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾದ ಪ್ರಸಂಗ ರಾಯ್ಪುರದಲ್ಲಿ ನಡೆದಿದೆ. 

ಸಂಪ್ರದಾಯದ ಪ್ರಕಾರ ತಾನು ಮಾಡಬೇಕಿದ್ದ ಅಂತಿಮ ಸಂಸ್ಕಾರವನ್ನು ಮಾಡಿದ ಸಹೋದರಿಯ ಮೇಲೆ ಕೋಪಗೊಂಡ ಸಹೋದರ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
 
ರಾಯ್ಪುರದ ತಿಲ್ದಾ- ನೇವರಾ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು 85 ವರ್ಷದ ಸುರುಜ್‌ಬಾಯಿ ಮಂಗಳವಾರ ವಯೋಸಹಜ ಕಾಯಿಲೆಗಳಿಂದ ಮೃತರಾಗಿದ್ದರು. ಮಗ ತೇಜರಾಮ್ ಮನೆಯಿಂದ ಹೊರಗೆ ಹಾಕಿದ್ದರಿಂದ ಆಕೆ ತನ್ನ ಮಗಳು ಗೀತಾ ಜತೆ ವಾಸಿಸುತ್ತಿದ್ದಳು. ಸಾಯುವ ಮುನ್ನ ಆಕೆ ತನ್ನ ಅಂತಿಮ ಸಂಸ್ಕಾರವನ್ನು ಮಗಳೇ ಮಾಡಬೇಕೆಂದು ತಿಳಿಸಿದ್ದಳು. ಅಂತೆಯೇ ಗೀತಾ ತಾಯಿಯ ಅಂತಿಮ ವಿಧಿಗಳನ್ನು ಪೂರೈಸಿದಳು. 
 
ಮಗಳು ತಾಯಿಯ ಅಂತಿಮ ಸಂಸ್ಕಾರವನ್ನು ನಡೆಸಿದ ವಿಚಾರವನ್ನು ಸ್ಥಳೀಯ ಪತ್ರಿಕೆಗಳಲ್ಲಿ ಓದಿದ ತೇಜರಾಮ್ ಅದರಿಂದ ಕೆರಳಿದ. ತನ್ನ ತಾಯಿ ಎಲ್ಲ ಆಸ್ತಿಯನ್ನು ಮಗಳಿಗೆ ಬರೆದುಕೊಡುತ್ತಾಳೆ ಎಂದು ಈ ಮೊದಲೇ ಆತ ಅಸಮಾಧಾನಗೊಂಡಿದ್ದ. ಈಗ ತಾನು ಮಗನಾಗಿ ಮಾಡಬೇಕಾದ ಕರ್ತವ್ಯವನ್ನು ಸಹ ತಂಗಿ ಕಿತ್ತುಕೊಂಡಳು ಎಂದು ಕೋಪಗೊಂಡ ಆತ ತಂಗಿಯ ಮನೆಗೆ ಬಂದು ಆಕೆಯನ್ನು ಊರವರ ಸಮ್ಮುಖದಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ. ಈ ಕೃತ್ಯದಲ್ಲಿ ಆತನ ಮಗ ಕೂಡ ಸಾಥ್ ನೀಡಿದ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada