ಆಂಧ್ರದ ಕಾಕಿನಡದ ಅಚ್ಚಂಪೇಟೆಯಲ್ಲಿ ಅಂಧ ಶಾಲಾ ಮುಖ್ಯಶಿಕ್ಷಕ ಶ್ರೀನಿವಾಸ್ ರಾವ್ ದೊಣ್ಣೆಯಿಂದ ಮೂರು ಅಂಧ ವಿದ್ಯಾರ್ಥಿಗಳಿಗೆ ಅಮಾನುಷವಾಗಿ ಥಳಿಸಿದ ಘಟನೆ ವರದಿಯಾಗಿದೆ.
ವಸತಿಶಾಲೆಯಲ್ಲಿ ಮಕ್ಕಳು ಹೋಂವರ್ಕ್ ಮಾಡಿಲ್ಲದಿರುವುದು ಮತ್ತು ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದುದರಿಂದ ರೊಚ್ಚಿಗೆದ್ದ ಮುಖ್ಯಶಿಕ್ಷಕ ತಮ್ಮ ಕೊಠಡಿಗೆ ಮೂವರು ಅಂಧ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕೋಲಿನಿಂದ ಅಮಾನುಷವಾಗಿ ಥಳಿಸುತ್ತಿದ್ದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ. ಮಕ್ಕಳಿಗೆ ಥಳಿಸಿದ್ದರಿಂದ ಬೆನ್ನು ಮೇಲೆ ಬಾಸುಂಡೆಗಳು ಬಂದಿವೆ. ಈ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಅಂಧ ವಿದ್ಯಾರ್ಥಿಯೊಬ್ಬ ಮುಖ್ಯೋಪಾಧ್ಯಾಯರ ಕಾಲಿಗೆ ಬಿದ್ದು ಕ್ಷಮಿಸುವಂತೆ ಬೇಡಿಕೊಂಡರೂ ಕೇಳದ ಶಿಕ್ಷಕರು ಮತ್ತಷ್ಟು ಕೋಲಿನಿಂದ ಥಳಿಸತೊಡಗಿದರು. ಶಾಲೆಯ ಮುಖ್ಯಶಿಕ್ಷಕರು ಅಂಧರಾಗಿದ್ದು, ಅವರ ರೀತಿಯಲ್ಲೇ ಅಂಧರಾದ ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಮನಬಂದಂತೆ ಥಳಿಸಿದ್ದು ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಶಾಲೆಯ ಮೇಲೆ ದಾಳಿ ಮಾಡಿ ರಾವ್ ಮತ್ತು ವಿ.ಕೆ. ರಾವ್ ಮೇಲೆ ಪೋಷಕರು ಮನಬಂದಂತೆ ಹಲ್ಲೆ ಮಾಡಿದ್ದಾರೆ.