ಯಾಕೂಬ್ ಮೆಮೊನ್ಗೆ ಗಲ್ಲು ಶಿಕ್ಷೆ ನೀಡಿರುವ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ನ ಪ್ರಮುಖ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಶಶಿ ತರೂರ್ಗೆ ಬಿಜೆಪಿ ಛೀಮಾರಿ ಹಾಕಿದೆ. ಅವರಿಬ್ಬರ ಈ ಹೇಳಿಕೆ ಭಯೋತ್ಪಾದನೆಯನ್ನು ತೊಡೆದು ಹಾಕಲು ಬಯಸುವ ಜನರಿಗೆ ಅವಮಾನ ಮಾಡುವಂತದ್ದು ಮತ್ತು ರಾಜಕೀಯದಲ್ಲಿದ್ದವರೆಲ್ಲ ವಿಷಾದ ಪಡುವಂತ ವಿಷಯವಿದು ಎಂದು ಬಿಜೆಪಿ ಖೇದ ವ್ಯಕ್ತ ಪಡಿಸಿದೆ.
ದಿಗ್ವಿಜಯ್ ಹೇಳಿಕೆ ಕಾನೂನು ಪ್ರಕ್ರಿಯೆ ಮೇಲೆ ಪ್ರಶ್ನೆಯನ್ನೆತ್ತುತ್ತಿದೆ. ಕಾನೂನು ಪ್ರಕ್ರಿಯೆಗೂ ರಾಜಕೀಯವನ್ನು ಜೋಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ವಿಷಾದನೀಯ ಮತ್ತು ದುರದೃಷ್ಟಕರ ಎಂದು ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ.
ಇದು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂದಿದ್ದ ತರೂರ್ ಟ್ವೀಟ್ಗೆ ನಾನು ಅಷ್ಟೊಂದು ಮಹತ್ವವನ್ನು ಕೊಡುವುದಿಲ್ಲ. ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ, 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಸಿಂಗ್ ಹೇಳಿಕೆ ನನಗೆ ಬಹಳ ಕೆಟ್ಟದ್ದೆನಿಸಿದೆ ಎಂದು ಅವರು ಹೇಳಿದ್ದಾರೆ.