ಅಧಿಕಾರಕ್ಕೇರಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಭ್ರಮವನ್ನಾಚರಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ವಾರ್ಷಿಕೋತ್ಸವದಲ್ಲಿ ತಾವು ಆಯೋಜಿಸಲು ನಿರ್ಧಸಿರುವ ಕಾರ್ಯಕ್ರಮಗಳ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಕೇಂದ್ರ ರಾಸಾಯನಿಕ ಗೊಬ್ಬರ ಖಾತೆ ಸಚಿವ ಅನಂತಕುಮಾರ್, ಮೇ 25 ರಂದು ಪ್ರಧಾನಿಯವರು ಮಥುರಾದಲ್ಲಿ ಮೆರವಣಿಗೆಯನ್ನು ನಡೆಸಲಿದ್ದಾರೆ ಮತ್ತು ಮೇ 26 ರಂದು ರೈತರಿಗಾಗಿ ವಾಹಿನಿಯೊಂದನ್ನು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.
ನಂತರ ಮೇ 26 ರಂದು ಹರಿಯಾಣಾದ ಕರ್ನಾಲ್ನಲ್ಲಿ ಪ್ರಧಾನಿ ಮತ್ತೊಂದು ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ.
ಮೇ 27 ರಂದು 5 ಗಂಟೆಗೆ ಗುಜರಾತಿನ ಸೂರತ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೇ 27 ರಂದು ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.
ಸರಕಾರದ ಒಂದು ವರ್ಷದ ಕಾರ್ಯ ಸಾಧನೆ ಕುರಿತು ಪ್ರಚಾರ ಮಾಡಲು ದೇಶಾದ್ಯಂತ 200 ಬೃಹತ್ ಮೆರವಣಿಗೆ, 5,000 ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಎಲ್ಲ ಕೇಂದ್ರ ಸಚಿವರು, ಸಂಸದರು ದೇಶಾದ್ಯಂತ ಮೆರವಣಿಗೆಗಳನ್ನು ನಡೆಸಿ ತಮ್ಮ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಗುರುತಿಸುವಂತೆ ಶ್ರಮಿಸಲಿದ್ದಾರೆ.