ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ವಾರಾಣಸಿಯ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೆ ಮುಂಚೆ ಮೋದಿ ಬನಾರಸ್ನ ಹಿಂದು ವಿವಿಯ ಮದನ್ ಮೋಹನ್ ಮಾಳವೀಯ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಗೌರವ ಸಲ್ಲಿಸಿದ ನಂತರ ಎರಡು ಕಿಮೀ ರೋಡ್ ಷೋನಲ್ಲಿ ತೆರಳಿ ವಾರಾಣಸಿ ಡಿಸಿ ಕಚೇರಿಯಲ್ಲಿ ಮೋದಿ ನಾಮಪತ್ರ ಸಲ್ಲಿಸಿದರು.
ಮೋದಿ ನಾಮಪತ್ರಕ್ಕೆ ನಾಲ್ವರು ಸೂಚಕರಿದ್ದರು. ಮೋದಿ ಅವರಿಗೆ ಅಮಿತ್ ಷಾ, ಮುಖ್ತರ್ ನಖ್ವಿ ಸಾಥ್ ನೀಡಿದರು. ನರೇಂದ್ರ ಮೋದಿ ಗುಜರಾತಿನ ವಡೋದರಾ ಮತ್ತು ಉತ್ತರ ಪ್ರದೇಶದ ವಾರಾಣಸಿಯ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, ವಾರಾಣಸಿಯಲ್ಲಿ ಆಮ್ ಆದ್ಮಿ ಮುಖಂಡ ಕೇಜ್ರಿವಾಲ್ ಜೊತೆಗೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ. ನಾಮಪತ್ರ ಸಲ್ಲಿಸಿದ ನಂತರ ಮೋದಿ ವಾರಾಣಸಿ ಜನರಿಗೆ ಧನ್ಯವಾದವನ್ನು ಸೂಚಿಸಿದರು.
ಇಡೀ ವಾರಾಣಸಿಯಲ್ಲಿ ಒಂದು ರೀತಿಯ ಮೋದಿಮತ ವಾತಾವರಣ ಕಂಡುಂಬಂದಿದ್ದು, ಸುಮಾರು ಮೂರುವರೆ ಲಕ್ಷ ಜನರು ಮೋದಿಯ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.