ಬಿಜೆಪಿ ಪಕ್ಷದ ಹಿರಿಯ ನಾಯಕರು ಪಕ್ಷದ ಹೈಕಮಾಂಡ್ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿರುವುದರಿಂದ ಬಿಜೆಪಿ ನಾಯಕತ್ವಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಬಾಲಿವುಡ್ ನಟ, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಆತ್ಮಕತೆಯಾದ ಎನಿಥಿಂಗ್ ಬಟ್ ಖಾಮೋಶ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿನ್ಹಾ, ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಕಡೆಗೆಣಿಸಿ, ಹೊರಗಿನ ನಾಯಕರನ್ನು ಪ್ರಚಾರಕ್ಕಾಗಿ ಕರೆತಂದಿರುವುದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಮಾತನಾಡಿ, ಚುನಾವಣೆಯಲ್ಲಿ ಜನತಾ ದಳದ ಸ್ಟಾರ್ ಪ್ರಚಾರಕರಾಗಿದ್ದ ಶುತ್ರಘ್ನ ಸಿನ್ಹಾ ಅವರನ್ನು ಭೇಟಿಯಾಗಿದ್ದೆ. ನಂತರ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಹೊಸ ಶಕ್ತಿಯನ್ನು ತಂದುಕೊಟ್ಟರು.ಆದರೆ, ಬಿಹಾರ್ ಚುನಾವಣೆಯಲ್ಲಿ ಅವರನ್ನು ಪ್ರಚಾರದಿಂದ ದೂರವಿಟ್ಟಿರುವುದು ಪಕ್ಷದ ಹಿನ್ನೆಡೆಗೆ ಮೂಲ ಕಾರಣವಾಯಿತು ಎಂದರು.
ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಹರ್ಷವರ್ಧನ್, ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್, ಕೀರ್ತಿ ಆಜಾದ್, ಅಮರ್ ಸಿಂಗ್ ಮತ್ತು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಉಪಸ್ಥಿತರಿದ್ದರು.