ಬಿಹಾರ್ ರಾಜ್ಯದಲ್ಲಿ ಮೊದಲ ಹಂತದ 49 ವಿಧಾನಸಭಾ ಕ್ಷೇತ್ರಗಳ ಮತದಾನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಅಲೆ ಬಿಜೆಪಿ ಪರವಾಗಿದ್ದು, ಬಿಜೆಪಿಯೇ ಮುಂದಿನ ಸರಕಾರ ರಚಿಸುವ ಸಾಧ್ಯತೆಗಳಿವೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಬಿಹಾರ್ ರಾಜ್ಯದ ಪ್ರವಾಸ ಮಾಡಿದಾಗ ರಾಜ್ಯದ ಜನತೆ ಬಿಜೆಪಿ ಪರ ವಾಲಿರುವುದು ಕಂಡುಬಂದಿದೆ. ಬಿಜೆಪಿ ಪಕ್ಷದ ಉತ್ತಮ ಕಾರ್ಯಗಳಿಗೆ ನಾನು ಸದಾ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಕೂಡಾ ವಂಚಿಸಿಯೇ ಮೈತ್ರಿಕೂಟದ ತೆಕ್ಕೆಗೆ ಸೆಳೆದಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೆಲ ನಿತೀಶ್ ಬೆಂಬಲಿಗರು ಲಾಲು ಯಾದವ್ರನ್ನು ಜನತಾ ಪರಿವಾರಕ್ಕೆ ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ಆರಂಭದಲ್ಲಿ ಜನತಾ ಪರಿವಾರದ ಬ್ಯಾನರ್ ಅಡಿಯಲ್ಲಿ ಮೈತ್ರಿಕೂಟದ ಪಕ್ಷಗಳು ಸ್ಪರ್ಧಿಸಬೇಕು ಎನ್ನುವ ನಿಲುವಿಗೆ ಬದ್ಧವಾಗಿದ್ದರು. ನಂತರ ಸಮಾಜವಾದಿ ಪಕ್ಷಕ್ಕೆ ಕೇವಲ ಐದು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ನೀಡುವುದಾಗಿ ವಂಚಿಸಿದ್ದರಿಂದ ಮೈತ್ರಿಕೂಟದಿಂದ ಹೊರಬರಬೇಕಾಯಿತು ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.