ಮಹೇಂದ್ರ ಸಿಂಗ್ ಭಾಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಪಿ. ಯಾದವ್ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಡೆಹ್ರಾಡೂನ್ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. 1992ರಲ್ಲಿ ಮಾಜಿ ಶಾಸಕ ಮಹೇಂದ್ರ ಸಿಂಗ್ ಭಾಟಿ ಹತ್ಯೆಯಾಗಿತ್ತು. ಮಾಜಿ ಸಂಸದ ಡಿ. ಪಿ. ಯಾದವ್, ಲಕ್ಕಡ್ ಪಾಲಾ, ಕರಣ್ ಯಾದವ್, ಪರಿಣಿತ್ ಭಾಟಿ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಪ್ರಕರಣ ಸಂಬಂಧ 8 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿತ್ತು. ಗಾಜಿಯಾಬಾದ್ ದಾದ್ರಿ ಶಾಸಕರಾಗಿದ್ದ ಮಹೇಂದ್ರ ಸಿಂಗ್ ಭಾಟಿಯನ್ನು ಹತ್ಯೆ ಮಾಡಲಾಗಿತ್ತು. 1993ರಲ್ಲಿ ಸಿಬಿಐ ತನಿಖೆ ಆರಂಭಿಸಿ 23 ವರ್ಷಗಳ ಬಳಿಕ ಸಿಬಿಐ ಕೋರ್ಟ್ ತೀರ್ಪು ಹೊರಬಿದ್ದಿದೆ. ಉತ್ತರಪ್ರದೇಶದ ವಿವಾದಾತ್ಮಕ ರಾಜಕಾರಣಿ ಈ ಹತ್ಯೆಯ ಡಿ.ಪಿ.ಯಾದವ್ ಇದುವರೆಗೆ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ತೀರ್ಪನ್ನು ಪ್ರಕಟಿಸಿರಲಿಲ್ಲ.
ಡಿ.ಪಿ. ಯಾದವ್ ಸಿಬಿಐ ನ್ಯಾಯಾಲಯಕ್ಕೆ ಶರಣಾದ ಬಳಿಕ ಕೋರ್ಟ್ ತೀರ್ಪು ಹೊರಬಿದ್ದಿದೆ. ಮಹೇಂದ್ರ ಸಿಂಗ್ ಭಾಟಿ ಅವರಿಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಡಿ.ಪಿ.ಯಾದವ್ ಪುತ್ರ ವಿಕಾಸ್ ಯಾದವ್ ಕೂಡ ನಿತೀಶ್ ಕಟಾರಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ್ದು, ಅಪ್ಪ ಮತ್ತು ಮಗ ಇಬ್ಬರೂ ಜೈಲು ಕಂಬಿ ಎಣಿಸುವಂತಾಗಿದೆ.