ಪ್ರಧಾನಿ ನರೇಂದ್ರ ಮೋದಿ ಯೋಗಾದಿನವನ್ನು "ಪ್ರಚಾರ ಸಾಧನ"ವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಯೋಗವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದ್ದರೆ ಮೊದಲು ಮದ್ಯವನ್ನು ನಿಷೇಧಿಸಿ ಎಂದು ಸವಾಲು ಹಾಕಿದ್ದಾರೆ.
ಜಾರ್ಖಂಡ್ನ ದಲ್ತೋಂಗಂಜ್ನಲ್ಲಿ ಕುಡಿತಕ್ಕೆ ನಿಷೇಧ ಹೇರುವ ಉದ್ದೇಶದ ಹೆಜ್ಜೆಯಾಗಿ ಆಯೋಜಿಸಲಾಗಿದ್ದ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕುಮಾರ್, ದೇಶದಾದ್ಯಂತ ಮದ್ಯ ನಿಷೇಧ ಮಾಡದೇ ಯೋಗವನ್ನು ಪ್ರಚುರ ಪಡಿಸುವುದು ಅಸಂಬದ್ಧ. ಯೋಗವನ್ನು ಮಾಡಲು ಏಕಾಗ್ರತೆ ಅತ್ಯವಶ್ಯ. ಆದರೆ ಮದ್ಯ ಏಕಾಗ್ರತೆಯನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ. ಜತೆಗೆ ಬಿಜೆಪಿ ನೇತೃತ್ವದ ಸರ್ಕಾರವಿರುವ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡುವಂತೆ ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.
ಬಿಜೆಪಿ ಯೋಗವನ್ನು "ಪಕ್ಷದ ಕಾರ್ಯಕ್ರಮ"ವೆಂಬಂತೆ ಬಿಂಬಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಜೂನ್ 21 ರಂದು ಎರಡನೆಯ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನ ಯೋಜನಾಬದ್ಧವಾಗಿನಡೆಯುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.