ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬೃಹತ್ ಮೊತ್ತದ ಹಣವನ್ನು ಚೆಲ್ಲುತ್ತಿದ್ದಾರೆ ಎಂಬ ಆರೋಪದ ಮೇಲೆ ಸ್ವಘೋಷಿತ ಕಪ್ಪು ಹಣ ವಿರೋಧಿ ಆಂದೋಲನಕಾರ, ಯೋಗ ಗುರುಬಾಬಾ ರಾಮದೇವ್ ರವರ ಮೂರು ಟ್ರಸ್ಟ್ಗಳ ಬ್ಯಾಂಕ್ ಖಾತೆಗಳನ್ನು ಚುನಾವಣಾ ಆಯೋಗ ತನಿಖೆ ಗೊಳಪಡಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ರಾಮದೇವ್ ರವರ ಟ್ರಸ್ಟ್ಗಳ ಬ್ಯಾಂಕ್ ಖಾತೆಗಳ ಮೂಲಕ ನಡೆದ ವಿತ್ತೀಯ ವ್ಯವಹಾರಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ 'ಡಿ ಸೆಂಥಿಲ್ ಪಾಂಡಿಯನ್' ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಯೋಗ ಗುರುವಿನ ದಿವ್ಯ ಯೋಗ ಮಂದಿರ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಮತ್ತು ಪತಂಜಲಿ ಯೋಗಪೀಠ ಟ್ರಸ್ಟ್ಗಳಿಂದ ಬಿಜೆಪಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ರಹಸ್ಯವಾಗಿ ಹಣ ಪೂರೈಕೆಯಾಗುತ್ತಿದೆ, ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮಕ್ಕೆ ಮುಂದಾಗಿದೆ ಎಂದು ಹರಿದ್ವಾರದ ಚುನಾವಣಾ ಅಧಿಕಾರಿ ಪಾಂಡಿಯನ್ ಹೇಳಿದ್ದಾರೆ.
'ಈ ಮೂರು ಟ್ರಸ್ಟ್ಗಳ ಬ್ಯಾಂಕ್ ಖಾತೆಗಳಿಂದ ಬೃಹತ್ ಪ್ರಮಾಣದ ಹಣವನ್ನು ವಿವಿಧ ರಾಜಕೀಯ ಪಕ್ಷಗಳಿಗಾಗಿ ಖರ್ಚು ಮಾಡಲಾಗಿದೆ' ಎಂದು ಆಯೋಗದ ವೆಬ್ಸೈಟ್ನಲ್ಲಿ ಕರ್ನಾಟಕದ ಬಿಜಾಪುರದ ನಿವಾಸಿ ಬಾಲಾ ಸಾಹೇಬ್ ಪಾಟೀಲ್ ಆರೋಪ ದಾಖಲಿಸಿದ್ದಾರೆ.
ಏತನ್ಮಧ್ಯೆ, ಗುರುವಾರ ರಾಮ್ದೇವ್ ಟ್ರಸ್ಟ್, ಅಹಮದಾಬಾದ್ ಮತ್ತು ವಡೋದರಾದಲ್ಲಿ ಯೋಗ ಶಿಬಿರಗಳನ್ನು ನಡೆಸುವುದಕ್ಕೆ ನೀಡಿದ್ದ ಅನುಮತಿಯನ್ನು ಆಯೋಗ
ರದ್ದುಗೊಳಿಸಿರುವುದರ ವಿರುದ್ಧ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದೆ.
ರಾಮ್ದೇವ ಬಾಬಾರ ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಲ್ಲಿಸಿದ ಎರಡು ಅರ್ಜಿಗಳಿಗೆ ಪ್ರತ್ಯುತ್ತರಗಳನ್ನು ನೀಡುವಂತೆ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ಪೊಲೀಸ್ ವಿಭಾಗಕ್ಕೆ ಹೈಕೋರ್ಟ್ ಆದೇಶ ನೀಡಿದೆ.
"ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಕಾರಣ ನೀಡಿ ಯೋಗ ಶಿಬಿರಗಳನ್ನು ನಡೆಸಲು ಚುನಾವಣಾ ಆಯೋಗ ತಡೆಯೊಡ್ಡಿದೆ " ಎಂದು ಅರ್ಜಿದಾರರು ಹೇಳಿದ್ದಾರೆ.