ಹರಿಯಾಣಾ ಸರಕಾರ ಕ್ಯಾಬಿನೇಟ್ ಸಚಿವರಾಗುವಂತೆ ನೀಡಿದ್ದ ಆಫರ್ನ್ನು ತಿರಸ್ಕರಿಸಿರುವ ಯೋಗಗುರು ರಾಮದೇವ್ ತಾನೊಬ್ಬ ಸನ್ಯಾಸಿಯಾಗಿಯೇ ಇರಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಬಾಬಾ, ಸನ್ಯಾಸಿ ಅಪಮಾನ, ಗೌರವ ಮತ್ತು ರಾಜಕೀಯಗಳನ್ನು ಮೀರಿದವನು ಎಂದರು. ಈ ಸಂದರ್ಭದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರ ಜತೆಗಿದ್ದರು.
ತಾನು ಸೇವೆಗಾಗಿ ಬದುಕುವವನು ಎಂದ ಬಾಬಾ, ಯೋಗ ಮತ್ತು ಆಯುರ್ವೇದವನ್ನು ಪ್ರಸಾರ ಮಾಡಲು ಹರಿಯಾಣಾ ಸರ್ಕಾರ ಸೂಚಿಸಿದರೆ ಆ ನಿಟ್ಟಿನಲ್ಲಿ ಶ್ರಮಿಸುವುದಾಗಿ ವಾಗ್ದಾನ ಮಾಡಿದರು.
"ಕ್ಯಾಬಿನೇಟ್ ಸಚಿವನಾಗುವಂತೆ ನೀಡಿದ ಆಫರ್ನ್ನು ನಾನು ನಯವಾಗಿ ತಿರಸ್ಕರಿಸುತ್ತಿದ್ದೇನೆ", ಎಂದವರು ಹೇಳಿದರು.
ಯೋಗ ಮತ್ತು ಆಯುರ್ವೇದವನ್ನು ಪ್ರಸಾರ ಮಾಡುವ ಉದ್ದೇಶದಿಂದ ಬಾಬಾರವರನ್ನು ಹರಿಯಾಣಾದ ಬ್ರಾಂಡ್ ಅಂಬಾಸಿಡರ್ ಆಗಿ ಈ ಹಿಂದೆಯೇ ನೇಮಿಸಲಾಗಿದೆ. ಈಗ ಅವರನ್ನು ಕ್ಯಾಬಿನೇಟ್ ದರ್ಜೆ ಸಚಿವರಾಗಿಸುವುದಾಗಿ ಹರಿಯಾಣಾ ಸರ್ಕಾರ ಘೋಷಿಸಿತ್ತು. ಆದರೆ ಬಾಬಾ ಅದನ್ನು ಸವಿನಯದಿಂದ ತಿರಸ್ಕರಿಸಿದ್ದಾರೆ.