ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ನೀಡಿದ ತೀರ್ಪು ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ನಿನ್ನೆಯ ರಾಜ್ಯಸಭೆಯ ಕಲಾಪವನ್ನು ಕೂಡ ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣ ನುಂಗಿ ಹಾಕಿತು.
ಬುಧವಾರ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ತೆಗೆದುಕೊಂಡ ತಕ್ಷಣವೇ ಸ್ವಾಮಿ ‘ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ'ದಲ್ಲಿ ಸೋನಿಯಾ ಪಾತ್ರದ ಕುಡಿತು ಮಾತನಾಡಲು ಪ್ರಾರಂಭಿಸಿದ್ದು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಗುರುವಾರ ಸ್ವಾಮಿ ಮಾತನಾಡಲು ನಿಂತುಕೊಳ್ಳುತ್ತಿದ್ದಂತೆ ಅವರಿಗೆ ಮಾತನಾಡಲು ಅವಕಾಶ ಕೊಡಬಾರದೆಂದು ವಿರೋಧ ಪಕ್ಷದ ನಾಯಕರು ಘೋಷಣೆಗಳನ್ನು ಕೂಗಿದರು.
ಸ್ವಾಮಿ ಮೇಲ್ಮನೆಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾರೆ. ಬಿಜೆಪಿಯ ಈ ಹೊಸ ಉಡುಗೊರೆ ಸಂಸತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕೊಡುವುದಿಲ್ಲ. ಸಂಸತ್ತಿನಲ್ಲಿ ಇದು ಅವರ ಎರಡನೆಯ ದಿನ. ಈಗಾಗಲೇ ಎರಡು ಬಾರಿ ಅವರ ಪದಬಳಕೆಯನ್ನು ಅಳಿಸಲಾಗಿದೆ. ಮತ್ತೆ ಎಷ್ಟು ಬಾರಿ ಅದನ್ನು ಅಳಿಸಿ ಹಾಕಬೇಕು ಎಂದು ಕಾಂಗ್ರೆಸ್ ಸಂಸದ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಪ್ರಶ್ನಿಸಿದ್ದಾರೆ.
ಸ್ವಾಮಿ ಅವರಿಗೆ ಬೀದಿ ಭಾಷೆ ಮತ್ತು ಸಂಸದೀಯ ಭಾಷೆಯ ನಡುವಿನ ವ್ಯತ್ಯಾಶವೇ ಗೊತ್ತಿಲ್ಲ ಎಂದು ಆಜಾದ್ ಕಿಡಿಕಾರಿದ್ದಾರೆ.