ದಲಿತ ವಿದ್ಯಾರ್ಥಿ ವೇಮುಲ ರೋಹಿತ್ ಅವರಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕೈಗೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದ್ದು ಪ್ರಕರಣವನ್ನು ದಲಿತ-ದಲಿತೇತರವನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದೆ.
ರಾಹುಲ್ ತೋರಿರುವ ಅಸಂವೇದನಾಶೀಲತೆಯನ್ನು ನೋಡಿಯೇ ರಾಹುಲ್ ಮತ್ತು ಜವಾಬ್ದಾರಿತನ ಒಟ್ಟಿಗೆ ಇರಲು ಸಾಧ್ಯವಿಲ್ಲವೆಂದು ನಾನು ಹೇಳಿದ್ದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ರೋಹಿತ್ ವೇಮುಲ ಪ್ರಕರಣವನ್ನು ದಲಿತ ಮತ್ತು ದಲಿತೇತರರ ಪ್ರಕರಣವನ್ನಾಗಿಸಲು ಕುತಂತ್ರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರೋಹಿತ್ ಪರ ಹೈದರಾಬಾದ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರೋಹಿತ್ ಅವರ ಸ್ನೇಹಿತರು ಮತ್ತು ಕುಟುಂಬದವರ ಮನವಿಯ ಮೇರೆಗೆ ನ್ಯಾಯಕ್ಕಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಕನಸುಗಳು ಮತ್ತು ಆಕಾಂಕ್ಷೆಗಳಿಂದ ತುಂಬಿದ್ದ ಯುವ ಜೀವವೊಂದು ಅದನ್ನು ಸಾಧಿಸುವ ಮೊದಲೇ ಮುದುಡಿ ಹೋಯಿತು ಎಂದು ಖೇದ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೈದರಾಬಾದ್ ಭೇಟಿಯನ್ನು ವಿರೋಧಿಸಿ ಎಬಿವಿಪಿ ತೆಲಂಗಾಣ ರಾಜ್ಯವ್ಯಾಪಿ ಕಾಲೇಜು ಬಂದ್ಗೆ ಕರೆ ನೀಡಿದೆ.
ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.