ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಐಕಾನ್. ಅವರಿಗೆ ಎಲ್ಲರೂ ಗೌರವ ನೀಡುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ವರ್ಣಿಸಿದ್ದಾರೆ.
"ಮಾಜಿ ಪ್ರಧಾನಿ ವಾಜಪೇಯಿ ಕೇವಲ ಭಾರತೀಯ ಮುತ್ಸದ್ದಿ ಮಾತ್ರವಲ್ಲ. ಅವರು ಪ್ರತಿಯೊಬ್ಬರಿಂದಲೂ ಮನ್ನಣೆ ಪಡೆಯುವ ಮತ್ತು ಪ್ರೀತಿಸಲ್ಪಡುವ ಅಂತಾರಾಷ್ಟ್ರೀಯ ಐಕಾನ್", ಎಂದು ಸಿಂಗ್ ಹೇಳಿದ್ದಾರೆ.
ಇಂದು ವಾಜಪೇಯಿಯವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪ್ರದಾನ ಮಾಡಲಿದ್ದಾರೆ.
ಮಾಜಿ ಪ್ರಧಾನಿ ಭಾರತ ರತ್ನಕ್ಕೆ ಭಾಜನರಾಗುತ್ತಿರುವುದು ಇಡೀ ದೇಶಕ್ಕೆ ಅಪಾರ ಸಂತೋಷ ತರುವ ವಿಷಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
"ಅವರ ವ್ಯಕ್ತಿತ್ವ, ಮಾತಿನ ಕೌಶಲ್ಯ, ಪ್ರಾಮಾಣಿಕತೆ ಮತ್ತು ನಮ್ರತೆ ಅಟಲ್ಜೀಯವರ ಮಹಾನತೆಯನ್ನು ಸೂಚಿಸುತ್ತದೆ. ಅವರೊಬ್ಬ ಉನ್ನತ ಮನುಷ್ಯ," ಎಂದು ಅವರು ಹೇಳಿದ್ದಾರೆ.
ಶಿಷ್ಟಾಚಾರವನ್ನು ಬದಿಗಿಟ್ಟು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಕೃಷ್ಣ ಮೆನನ್ ಮಾರ್ಗದಲ್ಲಿರುವ ವಾಜಪೇಯಿಯವರ ನಿವಾಸಕ್ಕೆ ತೆರಳಿ ಭಾರತ ರತ್ನವನ್ನು ಪ್ರದಾನ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಈ ವಿಶೇಷ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.