ರಾಷ್ಟ್ರೀಯ ರಾಜಧಾನಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ತಡೆ ಒಡ್ಡುವ ಮೂಲಕ ಮೋದಿ ಸರ್ಕಾರ ಗೂಂಡಾಗಿರಿ ತೋರಿಸುತ್ತಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಧಾನಿ ಮೋದಿಯವರ ವಿರುದ್ಧ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಅವರು ವಾಗ್ದಾಳಿ ನಡೆಸಿದ್ದಾರೆ. ಕಪ್ಪು ಹಣದಿಂದ ಹಿಡಿದು ಭ್ರಷ್ಟಾಚಾರ ವಿರೋಧಿ ಶಾಖೆ ಅಧಿಕಾರಿಗಳ ನೇಮಕ ಕುರಿತಂತೆ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಹಣಾಹಣಿಯ ವಿಷಯದಲ್ಲೂ ಅವರು ಮೋದಿಯವರ ವಿರುದ್ಧ ಗುಡುಗಿದ್ದಾರೆ.
"ದೆಹಲಿ ಸರಕಾರದ ಗೃಹ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಕಡೆಯಿಂದ ಇಂತಹ ಗೂಂಡಾಗಿರಿಯನ್ನು ಕಂಡಿಲ್ಲ", ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಹೇಳಿದ್ದಾರೆ.
ದೆಹಲಿ ಸರಕಾರದಲ್ಲಿ ಎರಡು ಗೃಹ ಕಾರ್ಯದರ್ಶಿಗಳು ಕೆಲಸ ಮಾಡುತ್ತಿರುವುದನ್ನು ಉಲ್ಲೇಖಿಸಿ ಆಪ್ ನಾಯಕ ಮಾತನಾಡುತ್ತಿದ್ದರು.
ಈ ಮೊದಲು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಧರಮ್ ಪಾಲ್ ಅವರನ್ನು ಅಧಿಕಾರದಿಂದ ಕಿತ್ತು ಹಾಕಿ ರಾಜೇಂದ್ರ ಕುಮಾರ್ ಅವರಿಗೆ ಚಾರ್ಚ್ ನೀಡಲಾಗಿತ್ತು. ಕೇಂದ್ರ ಈ ಆದೇಶವನ್ನು ರದ್ದುಗೊಳಿಸಿತು. ಆದರೆ ಕುಮಾರ್ ಮತ್ತು ಧರಮ್ ಪಾಲ್ ಇಬ್ಬರೂ ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು ಮತ್ತು ಇಬ್ಬರು ಕೂಡ ಗೃಹ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ.
"ನರೇಂದ್ರ ಮೋದಿಯವರು, ಅರವಿಂದ್ ಕೇಜ್ರಿವಾಲ್ಗೆ ಕೆಲಸ ಮಾಡಲು ಬಿಡುತ್ತಿಲ್ಲವೆಂಬುದನ್ನು ಇಡೀ ದೇಶವೇ ನೋಡುತ್ತಿದೆ ಮತ್ತು ಈ ಕುರಿತು ಮಾತನಾಡುತ್ತಿದೆ", ಎಂದು ಸಿಎಂ ಹೇಳಿದ್ದಾರೆ.