ದಿಮಾಪುರ, ನಾಗಾಲ್ಯಾಂಡ್: ಅಕ್ರಮ ವಲಸೆಗಾರನೆಂದು ಶಂಕಿಸಲಾದ ಅತ್ಯಚಾರ ಆರೋಪಿಯನ್ನು ಜೈಲಿನಿಂದ ಹೊರಕ್ಕೆ ಎಳೆದುತಂದ ಉದ್ರಿಕ್ತ ಗುಂಪು ಚೆನ್ನಾಗಿ ಥಳಿಸಿದ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಾಗಾಲ್ಯಾಂಡ್ ದಿಮಾಪುರದಲ್ಲಿ ಸಂಭವಿಸಿದೆ.
ಕಾನೂನನ್ನು ಕೈಗೆತ್ತಿಕೊಂಡ ಗುಂಪು, ಅತ್ಯಾಚಾರಿಯನ್ನು ಬೆತ್ತಲೆಗೊಳಿಸಿ ಧರಧರನೆ ರಸ್ತೆಯಲ್ಲಿ ನಾಲ್ಕು ಕಿ.ಮೀ.ವರೆಗೆ ಎಳೆದುಕೊಂಡು ಹೋದರು. ಕೋಲುಗಳು, ದೊಣ್ಣೆಗಳು, ಕಂಬಿಗಳಿಂದ ಅಮಾನುಷವಾಗಿ ಥಳಿಸಿದರು. ಒಂದು ಕಾಡುಪ್ರಾಣಿಯನ್ನು ಕೊಲ್ಲುವುದಕ್ಕಿಂತ ಹೀನಾತಿಹೀನವಾಗಿ ಕೊಂದು ಹಾಕಿದರು. ಇದಲ್ಲದೇ ಹಿಂಸಾಚಾರಕ್ಕೂ ಇಳಿದ ಗುಂಪು ಕನಿಷ್ಠ 10 ವಾಹನಗಳಿಗೆ ಬೆಂಕಿ ಹಚ್ಚಿದ್ದು, ದಿಮಾಪುರ ಜಿಲ್ಲೆಯಲ್ಲಿ ಕರ್ಫೂವನ್ನು ಹೇರಲಾಗಿದೆ.
ಸಯ್ಯದ್ ಫರೀದ್ ಖಾನ್ 35 ವರ್ಷ ವಯಸ್ಸಿನ ಹಳೆಯ ಕಾರು ವ್ಯಾಪಾರಿಯಾಗಿದ್ದು, ಫೆ. 23 ಮತ್ತು 24ರಂದು ವಿವಿಧ ಕಡೆಗಳಲ್ಲಿ 20 ವರ್ಷದ ನಾಗಾ ಯುವತಿಯನ್ನು ರೇಪ್ ಮಾಡಿದ್ದ. ಫೆ. 25ರಂದು ಪೊಲೀಸರು ಖಾನ್ನನ್ನು ಬಂಧಿಸಿದ ನಂತರ ಕೆಳ ಕೋರ್ಟ್ ಅವನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಸುಮಾರು 4000 ಜನರಿದ್ದ ಗುಂಪು ಕೇಂದ್ರೀಯ ಜೈಲಿನ ಗೇಟ್ಗಳನ್ನು ಮುರಿದು ಮುತ್ತಿಗೆ ಹಾಕಿ ಆರೋಪಿಯನ್ನು ಜೈಲಿನ ಹೊರಗೆ ಎಳೆದುತಂದು ಅವನನ್ನು ಬೆತ್ತಲೆಗೊಳಿಸಿ ದಿಮಾಪುರ ಪಟ್ಟಣದ ಹೃದಯಭಾಗದ ನಗರ ಟವರ್ಗೆ ಮೆರವಣಿಗೆಯಲ್ಲಿ ಕರೆದೊಯ್ದಿತು. ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿದ ಬಳಿಕ ಮೃತ ದೇಹವನ್ನು ಬಿಟ್ಟು ಗುಂಪು ಚದುರಿತು.