ರಾಷ್ಟ್ರೀಯತೆ ಮತ್ತು ರಾಷ್ಟ್ರವಿರೋಧಿ ಕುರಿತಂತೆ ಎದ್ದಿರುವ ಚರ್ಚೆಗೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ನಡುವೆ ನಡೆಯುತ್ತಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ನಿನ್ನೆ ತಾನೆ ರಾಹುಲ್ ಗಾಂಧಿ ಅವರು ಜೆಎನ್ಯುದಲ್ಲಿ ನಡೆದಿರುವ ಪ್ರತಿಭಟನೆಗಳನ್ನು ಬೆಂಬಲಿಸುವ ಮೂಲಕ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ದಾರೆ ಎಂದು ಕಿಡಿಕಾರಿದ್ದ ಶಾ ಇಂದು ಅವರ ಪರ ನಿಂತಿದ್ದಕ್ಕಾಗಿ ರಾಹುಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕಾಂಗ್ರೆಸ್ಗೆ ದೇಶ ವಿಭಜನೆಗೆ ಬೆಂಬಲ ನೀಡುವುದು ಎನ್ನಿಸುತ್ತದೆ ಎಂದು ಶಾ ಕಿಡಿಕಾರಿದ್ದಾರೆ.
ಈ ವಿವಾದವನ್ನು ಮುಂಬರುವ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕೆ ಸಹ ಬಳಸಿಕೊಳ್ಳುತ್ತೇವೆ ಎಂದಿರುವ ಬಿಜೆಪಿ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ದೇಶ ವಿರೋಧಿ ಮತ್ತು ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗುವುದು ರಾಷ್ಟ್ರದ್ರೋಹದ ಕೆಲಸ. ದೇಶದ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಶಾ ಹೇಳಿದ್ದಾರೆ.