ಆಮ್ ಆದ್ಮಿ ಪಕ್ಷದ ನಾಯಕಿ, ಬುಡಕಟ್ಟು ಕಾರ್ಯಕರ್ತೆ ಸೋನಿ ಸೋರಿ ಮೇಲೆ ಕೆಲ ದುಷ್ಕರ್ಮಿಗಳು ಕಳೆದ ರಾತ್ರಿ ಆಸಿಡ್ ಮಾದರಿಯ ಕಪ್ಪು ದ್ರವ ವಸ್ತುವನ್ನು ಎರಚಿದ ಘಟನೆ ಶನಿವಾರ ಸಂಜೆ ನಡೆದಿದೆ. ಛತ್ತೀಸ್ಘಡದ ದಾಂತೇವಾಡ ಜಿಲ್ಲೆಯಲ್ಲಿ ಈ ಕುಕೃತ್ಯ ನಡೆದಿದೆ.
ಸೋನಿ ಸೋರಿ ಅವರ ಮುಖ ಮತ್ತು ಕಣ್ಣಿಗೆ ಹಾನಿಯಾಗಿದ್ದು ಅವರನ್ನು ಜಗ್ದಾಲ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನಿ ಸೋರಿ ಅವರ ಆಪ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ದಂತೇವಾಡದ ಬಸ್ತಾನರ್ ಪಟ್ಟಣದಿಂದ ಸಂಬಂಧಿಕರೊಬ್ಬರ ಜತೆ ಗೀದಮ್ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ಅವರ ಮೇಲೆ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಅವರನ್ನು ತಡೆದು ದಾಳಿ ನಡೆಸಿದ್ದಾರೆ.
ಮೊದಲು ಆ್ಯಸಿಡ್ನಿಂದ ದಾಳಿ ನಡೆಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಆ್ಯಸಿಡ್ ಅಲ್ಲ. ಸುಟ್ಟ ಗ್ರೀಸ್ನ್ನು ಎರಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಿ ಸೋರಿ ಅಪಾಯದಿಂದ ಮುಕ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.