ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಪ್ರಭಾವಿತಗೊಳಿಸಿದ್ದ ಆಸಿಡ್ ದಾಳಿ ಬಲಿಪಶು ಯುವತಿ ಸೋನಾಲಿ ಮುಖರ್ಜಿ ಬುಧವಾರ ಸಿವಿಲ್ ಎಂಜಿನಿಯರ್ ಕೈ ಹಿಡಿದ್ದಾರೆ.
ಆಕೆಯ ಬಾಳಿಗೆ ಹೊಸ ಅರ್ಥ ನೀಡಿರುವ ಪತಿ ಚಿತ್ತರಂಜನ್ ತಿವಾರಿ ಒಡಿಸಾದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಮೂಲತಃ ಜೇಮಶೆಡ್ಪುರದ ನಿವಾಸಿಯಾಗಿದ್ದಾನೆ. ಸರಕಾರದ ಬಳಿ ತನಗೆ ಕೆಲಸ ನೀಡುವಂತೆ ಆಗ್ರಹಿಸಿ ಸೋನಾಲಿ ಮಾಧ್ಯಮದ ಮುಂದೆ ಬಂದಾಗ ಮತ್ತು ಕೆಬಿಸಿ ಕಾರ್ಯಕ್ರಮದ ಮೂಲಕ ಆತ ಸೋನಾಲಿ ಬಗ್ಗೆ ತಿಳಿದುಕೊಂಡಿದ್ದ.
ಆಕೆಯ ಆತ್ಮವಿಶ್ವಾಸಕ್ಕೆ ಪ್ರಭಾವಿತನಾದ ಚಿತ್ತರಂಜನ್ ಫೇಸ್ಬುಕ್ನಲ್ಲಿ ಫ್ರೆಂಡ್ಶಿಪ್ ಮನವಿ ಕಳುಹಿಸಿದ್ದ. ಈ ರೀತಿ ಸ್ನೇಹಿತರಾದ ಅವರು ನಂತರ ಪರಷ್ಪರ ಮೆಚ್ಚಿಕೊಂಡಿದ್ದಾರೆ.
ನನ್ನ ಬದುಕು ಎಲ್ಲವನ್ನು ಕಳೆದುಕೊಂಡು ಸ್ತಬ್ಧವಾದಂತಾಗಿತ್ತು.ಆದರೆ ಚಿತ್ತರಂಜನ್ ನಾನು ಕಳೆದುಕೊಂಡ ಸಂತೋಷವನ್ನು ಮರಳಿ ತಂದ ಎಂದು ಸೋನಾಲಿ ಅನ್ನುತ್ತಿದ್ದಾಗ ಆಕೆಯ ಪತಿ ಸಹ ಪತ್ನಿಯ ಕುಂದದ ಆತ್ಮವಿಶ್ವಾಸವನ್ನು ಹಾಡಿ ಹೊಗಳುವಲ್ಲಿ ಹಿಂದೆ ಬೀಳಲಿಲ್ಲ.
ಸೋನಾಲಿ 18 ವರ್ಷದವಳಿದ್ದಾಗ ಆಕೆಯ ಮೇಲೆ ಆಸಿಡ್ ದಾಳಿಯಾಗಿತ್ತು. ಪ್ರತಿ ದಿನ ಆಕೆ ದಾರಿಯಲ್ಲಿ ಓಡಾಡುತ್ತಿದ್ದಾಗ ಮೂವರು ಪುರುಷರು ಅಸಭ್ಯ ಪದ ಬಳಸುತ್ತಿದ್ದರು. ಅದನ್ನಾಕೆ ವಿರೋಧಿಸಿದ್ದರಿಂದ ಕೋಪಗೊಂಡ ಆ ಮೂವರು ಆಕೆಯ ಮನೆಯಲ್ಲೇ ಆಸಿಡ್ ದಾಳಿ ನಡೆಸಿದ್ದರು.