ಸ್ಪೀಕರ್ ಸುಮಿತ್ರಾ ಮಹಾಜನ್ ಕಾಂಗ್ರೆಸ್ನ 25 ಸಂಸದರನ್ನು 5 ದಿನಗಳ ಮಟ್ಟಿಗೆ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರಸ್ನ ಉಳಿದ 19 ಸಂಸದರು ಇಂದು ಕಲಾಪವನ್ನು ಬಹಿಷ್ಕರಿಸಿದ್ದಾರೆ ಎನ್ನಲಾಗಿದೆ.
ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಸಹ ಐದು ದಿನಗಳ ಕಲಾಪವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಕಾಂಗ್ರೆಸ್ಗೆ ಬೆಂಬಲ ಸೂಚಿಸಿರುವ ತೃಣಮೂಲ ಕಾಂಗ್ರೆಸ್ ಜೆಡಿಯು, ಎನ್ಸಿಪಿ, ಆಮ್ ಆದ್ಮಿ ಸೇರಿದಂತೆ 9 ವಿರೋಧ ಪಕ್ಷಗಳು ಕಲಾಪವನ್ನು 5 ದಿನಗಳ ಕಾಲ ಬಹಿಷ್ಕರಿಸುವುದಾಗಿ ಹೇಳಿದ್ದು ಸದನದ ಹೊರಗೆ ಮತ್ತು ಒಳಗೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಜತೆ ಸೇರಿ ಪ್ರತಿಭಟನೆಯನ್ನು ನಡೆಸಲು ಮುಂದಾಗಿವೆ.
ಅಮಾನತು ವಿರೋಧಿಸಿ ಸೋನಿಯಾ, ರಾಹುಲ್, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಮಂಗಳವಾರ ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇಂದು 10.15ರಿಂದ 11ರ ವರೆಗೆ ಸಂಸತ್ತಿನ ಹೊರಗಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಯಲಿದೆ.
ಪದೇ ಪದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಮತ್ತು ಸದನದ ಒಳಗೆ ನಿಯಮಬಾಹಿರವಾಗಿ ಭಿತ್ತಿಪತ್ರಗಳನ್ನು ತರುತ್ತಿದ್ದ ಕಾಂಗ್ರೆಸ್ ಸಂಸದರಿಗೆ ಸ್ಪೀಕರ್ ಮಹಾಜನ್ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಮತ್ತೆ ನಿನ್ನೆ ಅದು ಪುನರಾವರ್ತನೆಯಾದಾಗ ಸ್ಪೀಕರ್ 25 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿದ್ದರು.
ಸಂಸದರನ್ನು ಅಮಾನತುಗೊಳಿಸಿರುವ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಎಂದು ಕಾಂಗ್ರೆಸ್ ಹೇಳಿದರೆ, ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿತ್ತು, ಹಲವು ಬಾರಿ ಎಚ್ಚರಿಕೆ ನೀಡಿದರೂ ಕೇಳಿಸಿಕೊಳ್ಳಲಿಲ್ಲ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.