ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪದ ಮೇಲೆ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಯಾದವ್ಗೆ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾದ ರೂಪೇಶ್ ಕಟ್ಯಾನಿ, ದೇವೇಂದ್ರ ಕುಮಾರ್, ರೋಶನ್ ಕುಮಾರ್ ಮತ್ತು ಶೈಲೇಶ್ ಕುಮಾರ್ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೂಪೇಶ್ ಕಟ್ಯಾನಿ ಪರ ವಕೀಲರಾದ ಕಪಿಲ್ ಶರ್ಮಾ ಮತ್ತು ಸಂಜೀವ್ ಕುಮಾರ್ ಮಾತನಾಡಿ, ಜಾಮೀನಿಗಾಗಿ 20 ಸಾವಿರ ರೂಪಾಯಿಗಳ ಬಾಂಡ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೂರು ವರ್ಷ ವಯಸ್ಸಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕುರಿತಂತೆ ಪ್ರಕರಣ ದಾಖಲಿಸಲು ನಿರಾಕರಿಸಿದಾಗ, ಪಶ್ಚಿಮ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಆಪ್ ಶಾಸಕ ಯಾದವ್ ತಮ್ಮ ಬೆಂಬಲಿಗರೊಂದಿಗೆ ಹಿಂಸಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿತ್ತು.