ಆಮ್ ಆದ್ಮಿ, ಬಿಜೆಪಿಯ 'ಬಿ ಟೀಮ್' ಎಂದು ಟೀಕಿಸಿರುವ ಕಾಂಗ್ರೆಸ್, 2013ರಲ್ಲಿ ದೆಹಲಿಯಲ್ಲಿ ಸರಕಾರ ರಚಿಸಲು ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದ ನಾವು ಸ್ವಲ್ಪ ಮಟ್ಟಿಗೆ ಕಡಿಮೆ ಎನಿಸುವ ದುಷ್ಟರನ್ನೇ ಆಯ್ಕೆ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ.
ಸರಣಿ ಟ್ವಿಟ್ ಪ್ರಕಟಿಸಿರುವ ಸಿಂಗ್, ಆಪ್ ಬಿಜೆಪಿಯ ಎರಡನೇ ತಂಡ ಎನ್ನುವುದನ್ನು ಒತ್ತಿ ಹೇಳಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರವನ್ನು ಸದಾ ಟೀಕೆ ಮಾಡುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕಡಿಮೆ ಪ್ರಮಾಣದ ದುಷ್ಟರನ್ನು ಬೆಂಬಲಿಸುವ ಉದ್ದೇಶವನ್ನಿಟ್ಟುಕೊಂಡು ನಾವು 2013ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯಲ್ಲಿ ಸರಕಾರ ರಚಿಸಲು ಬೆಂಬಲ ನೀಡಿದ್ದೆವು ಎಂದಿದ್ದಾರೆ.
"ಆಪ್ ಮತ್ತು ಕೇಜ್ರಿವಾಲ್ ಬಿಜೆಪಿಯ ಬಿ ಟೀಮ್. ಮತ್ಯಾಕೆ ನೀವು ಆಪ್ಗೆ ಬೆಂಬಲ ನೀಡಿದಿರಿ ಎಂದು ನೀವು ನನಗೆ ಸವಾಲೆಸೆಯಬಹುದು. ನಮ್ಮ ಮುಂದೆ ಬಿಜೆಪಿ ಹಾಗೂ ಆಪ್ ಎಂಬ ಎರಡು ಆಯ್ಕೆಗಳಿದ್ದವು. ಇವೆರಡ ನಡುವೆ ಯಾರಿಗೆ ಬೆಂಬಲಿಸಬೇಕು ಎಂಬ ಪ್ರಶ್ನೆ ಎದುರಾದಾಗ ನಾವು ಕಡಿಮೆ ದುಷ್ಟರು ಎನ್ನುವ ಕಾರಣಕ್ಕೆ ಕೇಜ್ರಿವಾಲ್ ನೇತೃತ್ವದ ಆಪ್ಗೆ ಸಮರ್ಥನೆ ನೀಡಿದೆವು", ಎಂದು ಸಿಂಗ್ ಹೇಳಿದ್ದಾರೆ.
2010ರ ಫೆಬ್ರವರಿಯಲ್ಲಿ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ಏರ್ಪಡಿಸಿದ್ದ, ಆರ್ಎಸ್ಎಸ್ ನಾಯಕರು ಹಾಜರಿದ್ದ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಕೂಡ ಭಾಗವಹಿಸಿದ್ದರು ಎಂದು ಸಿಂಗ್ ಆರೋಪಿಸಿದ್ದಾರೆ.