ತನ್ನ ತಾಯಿಯ ಸಹಾಯದೊಂದಿಗೆ ಪತ್ನಿಯೇ ಪತಿಯನ್ನು ಉಸಿರುಗಟ್ಟಿಸಿ ಕೊಂದ ಘಟನೆ ಉತ್ತರ ಪ್ರದೇಶದ ಧಾಮ್ಪುರ ಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಮಗ- ಸೊಸೆಯನ್ನು ನೋಡಲೆಂದು ಬಂದ ಮೃತನ ತಂದೆಯಿಂದ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದೊಂದು ವರ್ಷದ ಹಿಂದೆ ಜ್ಯೋತಿ ಎಂಬಾಕೆಯನ್ನು ವಿವಾಹವಾಗಿದ್ದ 33 ವರ್ಷದ ಚಂದ್ರ ಮೋಹನ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಅವರಿಬ್ಬರ ನಡುವೆ ಸದಾ ಜಗಳವಾಗುತ್ತಿತ್ತು. ತಮ್ಮ ನಡುವಿನ ವ್ಯಾಜ್ಯವನ್ನು ಬಗೆಹರಿಸಲು ಜ್ಯೋತಿ ಸದಾ ತನ್ನ ತಾಯಿಯನ್ನು ಕರೆಸುತ್ತಿದ್ದಳು. ಸಮಸ್ಯೆಯನ್ನು ತಿಳಿಗೊಳಿಸಲು ಪ್ರಯತ್ನಿಸದ ಆಕೆಯ ತಾಯಿ ಕಾಜಲ್ ಅಳಿಯನ ಮೇಲೆ ಹಲ್ಲೆ ನಡೆಸುತ್ತಿದ್ದಳು. ಎಂದಿನಂತೆ ಎರಡು ದಿನಗಳ ಹಿಂದೆ ಕಾಜಲ್ ಮಗಳ ಮನೆಗೆ ಬಂದಿದ್ದಳು ಎಂದು ಮೃತನ ತಂದೆ ಹೇಳಿಕೆ ನೀಡಿದ್ದಾನೆ.
ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮೃತನ ತಂದೆ ಮಂಗಳವಾರ ಮಗನನ್ನು ಮಾತನಾಡಿಸಲು ಆತನ ಮನೆಗೆ ಬಂದಾಗ ಆತನ ದೇಹ ನೆಲದ ಮೇಲೆ ಬಿದ್ದಿರುವುದು ಕಂಡಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಆತ ಸಾವನ್ನಪಿರುವುದಾಗಿ ಘೋಷಿಸಿದರು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.