ನವದೆಹಲಿ: ಪೂರ್ವ ದೆಹಲಿಯ ವಿವೇಕ್ ವಿಹಾರ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಮೋಟರ್ಸೈಕಲ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಶಾಸಕರೊಬ್ಬರ ಮೇಲೆ ಅವರ ಮನೆಯ ಎದುರೇ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೂರ್ವ ದೆಹಲಿಯ ಶಹದಾರಾದ ಶಾಸಕ ಜಿತೇಂದರ್ ಸಿಂಗ್ ಶಂಟಿ ಅವರು ಗುಂಡಿನ ದಾಳಿಯಿಂದ ಪಾರಾಗಿದ್ದು, ವಿಡಿಯೋ ದೃಶ್ಯಾವಳಿಯಲ್ಲಿ ಇಬ್ಬರು ದುಷ್ಕರ್ಮಿಗಳು ಶಾಸಕರ ಜೊತೆ ವಾದಿಸಿ ನಂತರ ಒಬ್ಬ ಅವರತ್ತ ಗುಂಡು ಹಾರಿಸಿದ. ಮೊದಲಿಗೆ ನನ್ನ ಬಾಗಿಲಿನ ಕರೆಗಂಟೆ ಬಾರಿಸಿದಾಗ ನಾನು ಬಾಗಿಲು ತೆರೆದೆ.
ಆಗ ಇಬ್ಬರು ಕೆಲವು ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ನಾನು ನಿರಾಕರಿಸಿದಾಗ ಅವರಲ್ಲೊಬ್ಬ ಕಾಲರ್ ಹಿಡಿದು ಗನ್ ಹೊರಕ್ಕೆಳೆದು ಗುಂಡು ಹಾರಿಸಲಾರಂಭಿಸಿದ.
ನಾನು ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ನೆರೆಮನೆಗೆ ಓಡುತ್ತಿದ್ದಾಗಲೂ ಅವನು 3, 4 ಬಾರಿ ಗುಂಡು ಹಾರಿಸಿದ. ಪ್ರತಿಯೊಂದೂ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಹೆಚ್ಚಿನ ಸುಳಿವುಗಳಿಗೆ ವಿಡಿಯೋ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ.