ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ 76 ನೇ ಜನ್ಮದಿನಕ್ಕೆ ರಾಮ್ಪುರದಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. 75 ಅಡಿ ಉದ್ದದ ಕೇಕ್ ಮತ್ತು ಲಂಡನ್ನಿಂದ ತರಿಸಲಾಗಿರುವ ವಿಕ್ಟೋರಿಯನ್ ಜಟಕಾ ಬಂಡಿ ಅದ್ದೂರಿ ಸಮಾರಂಭದ ಮುಖ್ಯ ಆಕರ್ಷಣೆಯಾಗಿವೆ.
ನಾಳೆ ಮಧ್ಯರಾತ್ರಿಯಿಂದ ಜನ್ಮದಿನಾಚರಣೆ ಪ್ರಾರಂಭವಾಗಲಿದ್ದು, ತಮ್ಮ ಮಗ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜತೆ ಇಂದು ಮುಲಾಯಂ ರಾಮ್ಪುರ ತಲುಪಲಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.
ಲಂಡನ್ನಿಂದ ತರಿಸಲಾಗಿರುವ ವಿಶೇಷ ಜಟಕಾ ಬಂಡಿಯಲ್ಲಿ ಮುಲಾಯಂ ಅವರನ್ನು ಕುಳ್ಳಿರಿಸಿ ಸಿಆರ್ಪಿಎಫ್ ಶಿಬಿರದಿಂದ ಮೌಲಾನಾ ಅಲಿ ಜೌಹರ್ ವಿಶ್ವವಿದ್ಯಾಲಯದವರೆಗೆ ಸುಮಾರು 14 ಕಿ.ಮೀ ದೂರವರೆಗೆ ಕರೆ ತರಲಾಗುತ್ತಿದೆ. ಅವರ ವಿಶ್ವಾಸಾರ್ಹ ಲೆಫ್ಟಿನೆಂಟ್ ಮತ್ತು ಹಿರಿಯ ಯುಪಿ ಸಚಿವ ಅಜಮ್ ಖಾನ್ ಆ ಜಟಕಾವನ್ನು ಚಲಾಯಿಸಲಿದ್ದಾರೆ.
ಗಡಿಯಾರ ಮಧ್ಯರಾತ್ರಿ 12 ಗಂಟೆಗೆ ಮುಲಾಯಂ 75 ಅಡಿ ಉದ್ದದ ಕೇಕ್ ಕತ್ತರಿಸಿದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತಮ್ಮ ಹುಟ್ಟುಹಬ್ಬದ ದಿನ, ಎಸ್ಪಿ ಮುಖಂಡ ಬರ್ತಡೇ ಬಾಯ್ ಮುಲಾಯಂ ಸಿಂಗ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವುದರ ಜತೆಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.