ಹೋಮ್ ವರ್ಕ್ ಮಾಡಿದಿರುವ ಕಾರಣಕ್ಕೆ ನರ್ಸರಿ ಓದುತ್ತಿರುವ ಪುಟ್ಟ ಬಾಲಕನಿಗೆ ಶಿಕ್ಷಕ ಮಾರಣಾಂತಿಕವಾಗಿ ಥಳಿಸಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಪರಿಣಾಮ ಮಗು ಸಾವನ್ನಪ್ಪಿದೆ.
7 ವರ್ಷದ ಬಾಲಕ ಅರಾಜ್ ಹೋಮ್ ವರ್ಕ್ ಮಾಡದೇ ಶಾಲೆಗೆ ಬಂದಿದ್ದಕ್ಕೆ ಕೋಪಗೊಂಡ ಶಿಕ್ಷಕ ಮಗುವಿನ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ಪರಿಣಾಮ ಮಗುವಿನ ಮೂಗಿನಿಂದ ರಕ್ತ ಸುರಿಯತೊಡಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಶಾಲೆಯ ಅಧಿಕಾರಿಗಳು ನಿಮ್ಮ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆತನ ಪಾಲಕರಿಗೆ ತಿಳಿಸಿದ್ದಾರೆ.
ಆತನ ಪಾಲಕರು ಆಸ್ಪತ್ರೆಗೆ ಬಂದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ . ಚಿಕಿತ್ಸೆ ಫಲಕಾರಿಯಾಗದೆ ಕೆಲ ಸಮಯದ ಬಳಿಕ ಆತ ಕೊನೆಯುಸಿರೆಳೆದ. ತಲೆಯಲ್ಲಿ ಆದ ಗಂಭೀರ ಗಾಯದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿ ಸಾಬೀತು ಪಡಿಸಿದೆ.
ಮಗುವಿನ ದುರ್ಮರಣದಿಂದ ಆಕ್ರೋಶಗೊಂಡಿರುವ ನನ್ಕಾರ ಗ್ರಾಮಸ್ಥರು ಶಾಲೆಯ ಪ್ರಾಚಾರ್ಯರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಕೈಗೊಂಡಿದ್ದಾರೆ. ಶಾಲಾ ವ್ಯವಸ್ಥಾಪಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.