ಕಳೆದ ಅಕ್ಟೋಬರ್ 15 ರಂದು ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ತಾವು ಬೆಂಬಲಿಸಿದ ಅಭ್ಯರ್ಥಿಗೆ ಮತ ಹಾಕಲಿಲ್ಲವೆಂಬ ಕಾರಣಕ್ಕೆ65 ವರ್ಷದ ವೃದ್ಧೆಯೊಬ್ಬಳಿಗೆ ಬೆಂಕಿ ಹಚ್ಚಿದ ಘಟನೆ ನಾಸಿಕ್ನಿಂದ 90 ಕೀಮಿ ದೂರದಲ್ಲಿರುವ ಯೇವೋಲಾದ ಬಬುಲ್ಗಾಂವ್ ಎಂಬ ಹಳ್ಳಿಯಲ್ಲಿ ನಡೆದಿದೆ. 80% ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿರುವ ಆಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಜೆಲುಬಾಯಿ ಜಗನ್ನಾಥ್ ವೇಬಲ್ಸ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಶೋಕ್ ಬೊರ್ನಾರೆ (38), ಪಾಂಡುರಂಗ್ ಬೊರ್ನಾರೆ( 45) ಮತ್ತು ನಂದಕಿಶೋರ್ ಬುರಾಕ್ (40) ಎಂಬುವವರನ್ನು ಬಂಧಿಸಿದ್ದು ಅವರ ಮೇಲೆ ಕೊಲೆ ಯತ್ನ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರನ್ನು ಯೇವೋಲಾ ಕೋರ್ಟಿಗೆ ಹಾಜರುಪಡಿಸಬೇಕಿದ್ದು, ಅಕ್ಟೋಬರ್ 20 ರ ತನಕ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ.
ಬುಧವಾರ ಮಧ್ಯಾಹ್ನ ಮತಗಟ್ಟೆ ಕಡೆ ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ತಡೆದ ಆರೋಪಿಗಳು ಮತಯಂತ್ರದಲ್ಲಿ ಮೂರನೇ ಬಟನ್ ಒತ್ತಲು ಹೇಳಿದರು . ಅದು ಶಿವಸೇನಾ ಅಭ್ಯರ್ಥಿ ಸಂಭಾಜಿ ಪವಾರ್ ಹೆಸರಿನಲ್ಲಿತ್ತು ಎಂದು ದೂರುದಾರ ವೇಬಲ್ ತಿಳಿಸಿದ್ದಾರೆ.
ಮತ್ತೆ ಆಕೆಯನ್ನು ಮತಗಟ್ಟೆ ಹೊರಗೆ ಭೇಟಿಯಾದ ಆರೋಪಿಗಳು ನೀನು ಎರಡನೇ ಬಟನ್( ಎನ್ಸಿಪಿ ಅಭ್ಯರ್ಥಿ ಚ್ಚಗನ್ ಭುಜ್ಪಲ್ ಹೆಸರಿನಲ್ಲಿದ್ದ) ಒತ್ತಿದ್ದನ್ನು ನಾವು ಕಂಡಿದ್ದೇವೆ. ನಾವು ನಿನ್ನನ್ನು ಸಾಯಿಸುತ್ತೇವೆ ಎಂಬ ಬೆದರಿಕೆ ಒಡ್ಡಿದರು.
ಆ ದಿನ ರಾತ್ರಿ ನನ್ನ ಮನೆಗೆ ಬಂದ ಆರೋಪಿಗಳಲ್ಲಿ ಬಾರುಕ್ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡ, ಅಶೋಕ್ ಸೀಮೆಎಣ್ಣೆಯನ್ನು ನನ್ನ ಮೇಲೆ ಸುರಿದ ಮತ್ತು ಪಾಂಡುರಂಗ ಬೆಂಕಿ ಹಚ್ಚಿದ ಎಂದು ಪೀಡಿತೆ ಪೊಲೀಸರ ಬಳಿ ಹೇಳಿದ್ದಾಳೆ.