ತನ್ನ ತಂಗಿಯ ಪ್ರೇಮ ಸಂಬಂಧದಿಂದ ಕೆರಳಿದ್ದ ಸಹೋದರನೊಬ್ಬ ಆಕೆಯನ್ನು ಅಮಾನುಷವಾಗಿ ಕೊಲೆಗೈದ ಪ್ರಕರಣ ಮೀರತ್ನಲ್ಲಿ ನಡೆದಿದೆ. ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದು ಆರೋಪಿ ಸಹೋದರ ಈಗ ಪೊಲೀಸರ ವಶದಲ್ಲಿದ್ದಾನೆ.
ಕೊಲೆಗೈದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ ತಾನು ಮಾಡಿದ ಕೃತ್ಯಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾನೆ.
ತಂಗಿ ಉಸ್ಮಾ ಪ್ರೇಮಿಯ ಜತೆಯಲ್ಲಿ ಪರಾರಿಯಾಗುತ್ತಾಳೆ ಎಂಬ ಭಯದಿಂದ ನಮ್ಮ ಕುಟುಂಬ ಸರ್ಧಾನಾ ಗ್ರಾಮದಿಂದ ಸನುತಾ ಗ್ರಾಮಕ್ಕೆ ಸ್ಥಳಾಂತರಗೊಂಡಿತ್ತು. ಆದರೂ ಪ್ರೇಮಿಗಳಿಬ್ಬರು ಭೇಟಿಯಾಗುವುದನ್ನು ನಿಲ್ಲಿಸಿರಲಿಲ್ಲ. ಆತನನ್ನು ತೊರೆದು ಬಿಡುವಂತೆ ಎಷ್ಟು ಹೇಳಿದರೂ ಆಕೆ ಕೇಳುತ್ತಿರಲಿಲ್ಲ ಎಂದು ಆರೋಪಿ ಅನ್ಸ್ ಪೊಲೀಸರ ಬಳಿ ಹೇಳಿದ್ದಾನೆ.
ಇದರಿಂದ ಕೋಪಗೊಂಡ ಆತ ಆಕೆ ಮಲಗಿದ್ದಾಗ ಕುತ್ತಿಗೆಯನ್ನು ಸೀಳಿ ಕೊಲೆಗೈದು ಪರಾರಿಯಾಗಿದ್ದಾನೆ ಮತ್ತು ಅದೇ ಸಂಜೆ ಮರಳಿ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.