ಮಾತೃ ಪಕ್ಷ ಕಾಂಗ್ರೆಸ್ಗೆ ಮರಳುವ ಯಾವುದೇ ಸಾಧ್ಯತೆಗಳಿಲ್ಲದಿರುವುದರಿಂದ, ಉತ್ತರಾಖಂಡ್ ಬಂಡಾಯ ಶಾಸಕರು ಇನ್ನು ಕೆಲವು ದಿನಗಳಲ್ಲಿ ಬಿಜೆಪಿ ತೆಕ್ಕೆಗೆ ಸೇರುವ ಸಾಧ್ಯತೆ ದಟ್ಟವಾಗಿದೆ.
2014 ರಲ್ಲಿ ಸೋಮೇಶ್ವರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಸಕಿ ರೇಖಾ ಆರ್ಯ ಹೊರತುಪಡಿಸಿ ಉಳಿದ 9 ಜನ ಬಂಡಾಯ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸಲು ಬುಧವಾರ ದೆಹಲಿಯಲ್ಲಿ ಸಭೆ ಸೇರಿದ್ದರು.
ಈ ಗುಂಪು ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದು , ಮೇ 13 ಅಥವಾ14 ರಂದು ಅವರು ಬಿಜೆಪಿ ಸೇರುತ್ತಾರೆ ಎಂಬುದಕ್ಕೆ ಬಲವಾದ ಸಂಕೇತ ದೊರಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೃಷಿ ಮಂತ್ರಿ ಹರಕ್ ಸಿಂಗ್ ರಾವತ್, ನಮ್ಮ ಮುಂದಿನ ನಡೆ ಕುರಿತು ಚರ್ಚಿಸಲು ನವದೆಹಲಿಯಲ್ಲಿ ಭೇಟಿಯಾಗಿದ್ದೆವು. ನಮಗೆರಡು ಆಯ್ಕೆಗಳಿವೆ. ಒಂದು ಬಿಜೆಪಿ ಸೇರುವುದು, ಇಲ್ಲ ಹೊಸ ರಾಜಕೀಯ ಪಕ್ಷವನ್ನು ಸೇರುವುದು ಎಂದಿದ್ದಾರೆ.
ಆದರೆ ಕಾಂಗ್ರೆಸ್ಗೆ ಮರಳುವ ಸಾಧ್ಯತೆಗಳನ್ನು ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.