ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಕ್ರಿಮಿನಲ್ ಆರೋಪವನ್ನೆದುರಿಸುತ್ತಿರುವ ಆರೋಪಿಯ ಜೊತೆ ಪೊಲೀಸರು ಶಾಪಿಂಗ್ ಮಾಲ್ಗೆ ಹೋಗಿದ್ದನ್ನು ನೋಡಿದ್ದೀರಾ? ಕೇಳಿದ್ದೀರಾ?
ಆಗ್ರಾದಲ್ಲಿ ಇದು ನಡೆದಿದೆ. ಆಗ್ರಾ ಪೊಲೀಸರು ಮನೋಜ್ ಎಂಬ ಆರೋಪಿಯೋರ್ವನನ್ನು ತಿಹಾರ್ ಜೈಲಿನಿಂದ ಕೋರ್ಟ್ ವಿಚಾರಣೆಗೆಂದು ಆಗ್ರಾಕ್ಕೆ ಕರೆ ತಂದಿದ್ದರು. ನೇರವಾಗಿ ಕೋರ್ಟ್ಗೆ ಹೋಗುವ ಬದಲು ಅವರು ಆರೋಪಿಯನ್ನು ಕರೆದುಕೊಂಡು ಶಾಪಿಂಗ್ ಮಾಲ್ಗೆ ಹೋಗಿದ್ದಾರೆ. ಅಲ್ಲೇ ಇದ್ದ ಮಾಧ್ಯಮದವರು ಆರೋಪಿಯ ಜತೆ ಪೊಲೀಸರು ಶಾಪಿಂಗ್ ನಡೆಸುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಪ್ರಾರಂಭಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಪೊಲೀಸರು ಧಾವಿಸಿ ಜೀಪ್ ಕಡೆ ನಡೆದಿದ್ದಾರೆ.
ಆರೋಪಿಯ ಜತೆ ಒಟ್ಟು ಆಗ್ರಾದ 5 ಪೊಲೀಸರು ಮತ್ತು 6 ದೆಹಲಿ ಪೊಲೀಸ್ ಪೇದೆಗಳಿದ್ದರು ಎಂದು ಮಾಹಿತಿ ಲಭಿಸಿದೆ.
ಆರೋಪಿಯ ಜತೆ ಪೊಲೀಸರ ಜಾಲಿ ಔಟಿಂಗ್ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಆಗ್ರಾ ಎಸ್ಎಸ್ಪಿ ತಮ್ಮ ಅಧಿಕಾರದಡಿಯಲ್ಲಿ ಬರುವ 5 ಜನ ಪೇದೆಗಳನ್ನು ಅಮಾನತು ಮಾಡಿದ್ದು, ಪ್ರಕರಣದಲ್ಲಿ ಕಾಣಿಸಿಕೊಂಡ ದೆಹಲಿ ಪೊಲೀಸ್ ಪೇದೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಆರೋಪಿ ಮನೋಜ್ ಬಗರ್ವಾಲಾ ಕಳೆದ ಹಲವಾರು ವರ್ಷಗಳಿಂದ ತಿಹಾರ್ ಜೈಲಿನಲ್ಲಿದ್ದಾರೆ. ಆತ ಅಂತರ್ ರಾಜ್ಯ ವಾಹನ ಕಳ್ಳತನ ತಂಡದ ನಾಯಕವಾಗಿದ್ದು 5 ರಾಜ್ಯಗಳಲ್ಲಿ ಪ್ರಕರಣವನ್ನೆದುರಿಸುತ್ತಿದ್ದಾನೆ.
ಆತನ ಜತೆ ಬಹಳ ಸಲಿಗೆಯಿಂದ ಆಗ್ರಾದ ಮಹಿಳೆಯೊಬ್ಬರ ಪತಿ 2010ರಲ್ಲಿ ಕೊಲೆಯಾಗಿದ್ದ. ಪ್ರಕರಣದಲ್ಲಿ ಮನೋಜ್ ಹೆಸರು ಕೇಳಿಬಂದಿದ್ದರಿಂದ ವಿಚಾರಣೆಗಾಗಿ ಆತನನ್ನು ಕೋರ್ಟ್ಗೆ ಕರೆತರಲಾಗಿತ್ತು.