ಸುಪ್ರೀಂ ಕೋರ್ಟ ನಮಗೆ ಲೆಕ್ಕಕ್ಕಿಲ್ಲ ಎಂದ ಕಾಂಗ್ರೆಸ್ ಸರ್ಕಾರದಿಂದ ಕಳಂಕಿತರ ರಕ್ಷಣೆ
ನವದೆಹಲಿ , ಬುಧವಾರ, 25 ಸೆಪ್ಟಂಬರ್ 2013 (10:21 IST)
ಒಂದೆಡೆ ಕಳಂಕಿತರನ್ನು ಕಾಂಗ್ರೆಸ್ನಿಂದ ಹೊರ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಸಭೆ ಸಮಾರಂಭಗಳಲ್ಲಿ ಆರ್ಭಟಿಸುತ್ತಿದ್ದರೆ, ಇನ್ನೊಂದೆಡೆ ಸ್ವತಃ ಕೇಂದ್ರ ಸರ್ಕಾರವೇ ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಣೆ ಮಾಡುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾದ ಸಂಸದರು ಮತ್ತು ಶಾಸಕರ ಸದಸ್ಯತ್ವವನ್ನು ತಕ್ಷಣ ರದ್ದು ಪಡಿಸುವಂತೆ ಸುಪ್ರೀಂಕೋರ್ಟ್ ಜುಲೈ 10 ರಂದು ತೀರ್ಪು ನೀಡಿತ್ತು. ಆದ್ರೆ ಈ ತೀರ್ಪನ್ನು ಪುನರ್ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಆದರೆ, ಈ ಅರ್ಜಿ ಇತ್ಯರ್ಥಗೊಳ್ಳುವ ಮುನ್ನವೇ ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಭ್ರಷ್ಟಾಚಾರ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ಸಂಸದ ರಶೀದ್ ಮಸೂದ್ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಈ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.ಯಾಕಂದ್ರೆ 1990-91ರ ಅವಧಿಯಲ್ಲಿ ವಿ.ಪಿ. ಸಿಂಗ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾಗ ತ್ರಿಪುರಾ ರಾಜ್ಯದ ಕೋಟಾದಿಂದ ದೇಶದಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಅನರ್ಹ ಅಭ್ಯರ್ಥಿಗಳಿಗೆ ಸೀಟು ಮಂಜೂರು ಮಾಡಿದ್ದ ಆರೋಪ ಮಸೂದ್ ಮೇಲಿದೆ. ಕಳೆದ ವಾರವಷ್ಟೇ ಸಿಬಿಐ ನ್ಯಾಯಾಲಯ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು.
ಇನ್ನೊಂದೆಡೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ಮೇವು ಹಗರಣದಲ್ಲಿ ಮುಖ್ಯ ಆರೋಪಿಯಾಗಿದ್ದಾರೆ. ಅಷ್ಟೇ ಅಲ್ಲ, ಇನ್ನಷ್ಟು ಕಾಂಗ್ರೆಸ್ ಮುಖಂಡರು ಮತ್ತು ಯುಪಿಎ ಬೆಂಬಲಿತ ಸಂಸದರು ಹಗರಣಗಳ ಕೂಪದಲ್ಲಿ ತೊಡಗಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ ಅವರೆಲ್ಲರನ್ನೂ ತಪ್ಪಿತಸ್ಥರು ಎಂದು ಪರಿಗಣಿಸಿ ಶಿಕ್ಷೆಯನ್ನು ಪ್ರಕಟಿಸಿದರೆ, ಕಾಂಗ್ರೆಸ್ನ ಪ್ರಮುಖ ನಾಯಕರು ಜೈಲುಪಾಲಾಗುವ ಸಾಧ್ಯತೆಗಳಿದ್ದು, ಅವರೆಲ್ಲರ ಸದಸ್ಯತ್ವ ರದ್ದಾಗಲಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಷ್ಟವಾಗಲಿದ್ದು ಮುಂದಿನ 2014 ರ ಚುನಾವಣೆಯಕಲ್ಲಿ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ನ್ಯಾಯಾಲಯದ ತೀಪಿಗೂ ಕಾಯದೇ, ಕೇಂದ್ರ ಸರ್ಕಾರ ಕಳಂಕಿತರನ್ನು ರಕ್ಷಿಸುವ ಸಲುವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲು ಮುಂದಾಗಿದೆ. ಕಾಂಗ್ರೆಸ್ನ ಈ ನಿರ್ಧಾರವನ್ನು ವಿ.ಪಕ್ಷಗಳು ತೀವ್ರವಾಗಿ ಖಂಡಿಸಿವೆ.