Select Your Language

Notifications

webdunia
webdunia
webdunia
webdunia

ಶರದ್ ಪವಾರ್‌ಗೆ ಅನಾರೋಗ್ಯ ವದಂತಿ ತಳ್ಳಿಹಾಕಿದ ಎನ್‌ಸಿಪಿ

ಶರದ್ ಪವಾರ್‌ಗೆ ಅನಾರೋಗ್ಯ ವದಂತಿ ತಳ್ಳಿಹಾಕಿದ ಎನ್‌ಸಿಪಿ
PTI
ಕೇಂದ್ರ ಕೃಷಿ ಸಚಿವ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ತನ್ನ ಆರೋಗ್ಯದ ಕುರಿತಾದ ವದಂತಿಗಳನ್ನು ತಳ್ಳಿ ಹಾಕಿದ್ದು, ತನ್ನ ಆರೋಗ್ಯ ಉತ್ತಮವಿದೆ. ಕರ್ನಾಟಕದಲ್ಲಿ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸ ನಿರತನಾಗಿದ್ದೇನೆ ಎಂದು ಹೇಳಿದ್ದಾರೆ.

ಮಡಿಕೇರಿಯ ಕಾರ್ಡಮೋಮ್‌ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಪವಾರ್‌ ತನ್ನ ಅನಾರೋಗ್ಯದ ಕುರಿತಾಗಿ ವಿವಿಧ ವದಂತಿಗಳು ಹರಡುತ್ತಿದ್ದಂತೆಯೇ ತನ್ನ ಕಾರ್ಯಚಟುವಟಿಕೆಗಳ ಮರು ಪರಿಶೀಲನೆ ನಡೆಸಿದ್ದಾರೆ.

ಪವಾರ್‌ ಅವರ ಆರೋಗ್ಯ ಉತ್ತಮವಿದ್ದು ವದಂತಿಗಳನ್ನು ನಂಬಬಾರದು ಎಂದು ಮುಂಬಯಿಯಲ್ಲಿ ಮಹಾರಾಷ್ಟ್ರ ಎನ್‌ಸಿಪಿ ಘಟಕ ಪ್ರಕಟನೆ ಹೊರಡಿಸಿದೆ.

ಪವಾರ್‌ ಸಾಹೇಬ್‌ ಅವರ ಆರೋಗ್ಯದ ಬಗ್ಗೆ ಬುಧವಾರ ಮಧ್ಯಾಹ್ನದಿಂದ ವದಂತಿಗಳು ಹರಡುತ್ತಿವೆ. ವಿವಿಧ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಿದೆ ಎಂದು ಎನ್‌ಸಿಪಿ ವಕ್ತಾರ ಮಹೇಶ್‌ ತಾಪ್ಸೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪವಾರ್‌ ಸಾಹೇಬ್‌ ಅವರ ಆರೋಗ್ಯ ಉತ್ತಮವಿದೆ. ಸದ್ಯ ಕರ್ನಾಟಕದಲ್ಲಿದ್ದಾರೆ. ಪೂರ್ವ ನಿಗದಿಯಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಎನ್‌ಪಿಸಿ ರಾಜ್ಯ ಘಟಕದ ಅಧ್ಯಕ್ಷ ಮಧುಕರ್‌ ಪಿಛಡ್‌ ಹೇಳಿದ್ದಾರೆ.

ಪವಾರ್‌ ಕರ್ನಾಟಕದಲ್ಲಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಎಗ್ರಿಕಲ್ಚರಲ್‌ ರಿಸರ್ಚ್‌ ಮಾನ್ಯತೆ ಹೊಂದಿರುವ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದಾರೆ. ಶನಿವಾರ ದಿಲ್ಲಿಗೆ ಹಿಂದಿರುಗುತ್ತಾರೆ ಎಂದು ದಿಲ್ಲಿಯಿಂದ ಪವಾರ್‌ ಅವರ ಕಚೇರಿ ಪ್ರಕಟನೆ ಹೊರಡಿಸಿದೆ.

ಕಳೆದ ರವಿವಾರ ಕೊಲ್ಹಾಪುರದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಪವಾರ್‌ ಹಠಾತ್‌ ಅನಾರೋಗ್ಯ ಪೀಡಿತರಾಗಿ, ಪುಣೆಗೆ ಹೆಲಿಕಾಪ್ಟರ್‌ನಲ್ಲಿ ವಾಪಸು ಬಂದಿದ್ದರು.

Share this Story:

Follow Webdunia kannada